ಶವಸಂಸ್ಕಾರಕ್ಕೆ ತೆರಳುತ್ತಿದ್ದಾಗ ಅಪಘಾತ: ಶಿಕ್ಷಕ ದಂಪತಿ ಸೇರಿ ಮೂವರು ಮೃತ್ಯು
Update: 2020-02-03 17:23 GMT
ಮಡಿಕೇರಿ, ಫೆ.3: ತಂದೆಯ ಶವ ಸಂಸ್ಕಾರಕ್ಕೆಂದು ಹೊರಟಿದ್ದ ಕೊಡಗಿನ ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕ ಹಾಗೂ ಅವರ ಪತ್ನಿ ರಸ್ತೆ ಅಪಘಾತದಲ್ಲಿ ಬಲಿಯಾದ ಘಟನೆ ಕೂಡ್ಲಿಗಿ ಪಟ್ಟಣದ ವಿರುಪಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕಾರು ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಶಿಕ್ಷಕ ವಸಂತ ಕುಮಾರ್ (37), ಪತ್ನಿ ವಿನುತ (30) ಹಾಗೂ ಕಾರು ಚಾಲಕ ಲೋಹಿತ್ (38) ಮೃತಪಟ್ಟಿದ್ದಾರೆ. ಶಿಕ್ಷಕ ದಂಪತಿಯ ಪುತ್ರಿ ಋತ್ವಿಕಾ (2) ಬದುಕುಳಿದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ವಸಂತ ಕುಮಾರ್ ಬಾಗಲಕೋಟೆ ಜಿಲ್ಲೆಯ ಇಳಕಲ್ಲು ಮೂಲದವರಾಗಿದ್ದು, ಕೊಂಡಂಗೇರಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಳಕಲ್ಲಿನಲ್ಲಿ ವಸಂತ ಕುಮಾರ್ ಅವರ ತಂದೆ ಮೃತಪಟ್ಟ ಹಿನ್ನೆಲೆ ಪತ್ನಿ ಮತ್ತು ಮಗಳೊಂದಿಗೆ ಶವ ಸಂಸ್ಕಾರಕ್ಕೆಂದು ಮಡಿಕೇರಿಯ ಟ್ಯಾಕ್ಸಿಯಲ್ಲಿ ತೆರಳಿದ್ದರು. ಮೃತ ಕಾರು ಚಾಲಕ ಲೋಹಿತ್ ಮೂರ್ನಾಡು ಗ್ರಾಮದ ನಿವಾಸಿಯಾಗಿದ್ದಾರೆ.