×
Ad

ಗಡಿ ವಿವಾದ ಸೌಹಾರ್ದ ಬದುಕಿಗೆ ಅಡ್ಡಿಯಾಗದಿರಲಿ: ನ್ಯಾ.ಕೆ.ಎಲ್.ಮಂಜುನಾಥ್

Update: 2020-02-03 23:02 IST

ಬೆಳಗಾವಿ, ಫೆ.3: ನಾವೆಲ್ಲರೂ ಭಾರತೀಯರು ಎಲ್ಲರೂ ಅನ್ಯೂನ್ಯತೆಯಿಂದ ಇರಬೇಕು. ಗಡಿ ವಿಷಯ ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ಯಾರು ಗಲಾಟೆ ಮಾಡದೆ ಶಾಂತಿ ಕಾಪಾಡಬೇಕು ಎಂದು ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಹೇಳಿದ್ದಾರೆ.

ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗಡಿ ವಿವಾದದ ದಾವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಡಿ ವಿವಾದ ಎಂದರೆ ಏನೂ ಎಂಬುದು ಬಹಳಷ್ಟು ಜನರಿಗೆ ಇದೂವರೆಗೆ ತಿಳಿದಿಲ್ಲ, ಮಹಾದಾಯಿ ವಿಚಾರ ಏನು ಎಂಬುದು ಸಹ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ ಎಂದು ಮಂಜುನಾಥ್ ಅಭಿಪ್ರಾಯಪಟ್ಟರು. 1956ರಲ್ಲಿ ಮೈಸೂರು ರಾಜ್ಯ ಎಂದು ನಾಮಕರಣವಾದ ಮೇಲೆ ಅನೇಕ ಪ್ರದೇಶಗಳು ಕರ್ನಾಟಕದಲ್ಲಿ ಸೇರಿಕೊಂಡರೆ, ಕೆಲ ಪ್ರದೇಶಗಳು ಅಕ್ಕಪಕ್ಕದ ರಾಜ್ಯಗಳ ಪಾಲಾದವು, ಅದೇ ರೀತಿ ಚಂದಗಡ ಹೊರತುಪಡಿಸಿ ಬೆಳಗಾವಿ ಕರ್ನಾಟಕದ ಮಡಿಲಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಮಹಾರಾಷ್ಟ್ರ ಸರಕಾರ ನಮಗೆ ಅನ್ಯಾಯವಾಗಿದೆ ಎಂದು 1956ರಲ್ಲಿ ಮನವಿ ಸಲ್ಲಿಸಿದಾಗ ಗಡಿ ಭಾಗದ ಕುರಿತು ಕರ್ನಾಟಕ ಮಾತ್ರ ಕೇಂದ್ರಕ್ಕೆ ಗಡಿ ಸಮಸ್ಯೆ ಕುರಿತು ವರದಿ ಸಲ್ಲಿಸಿದೆ ಎಂದು ಮಂಜುನಾಥ್ ತಿಳಿಸಿದರು.

ಮಹಾಜನ್ ಆಯೋಗ ಗಡಿ ಪ್ರದೇಶದ ಕುರಿತು ವರದಿಯನ್ನು 1957ರಲ್ಲಿ ನೀಡಿದಾಗ ಮಹಾರಾಷ್ಟ್ರದವರು ಅದಕ್ಕೆ ಒಪ್ಪಿರಲಿಲ್ಲ. ಕರ್ನಾಟಕದ ಬೀದರ್, ಗುಲ್ಬರ್ಗಾ, ಬಸವಕಲ್ಯಾಣ, ಅಳಂದ, ಕಾರವಾರ, ಹಳಿಯಾಳ, ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ, ಹೀಗೆ 814 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಮಹಾರಾಷ್ಟ್ರದವರು ವಾದ ಮಾಡಿದರು ಎಂದು ಅವರು ತಿಳಿಸಿದರು.

814 ಹಳ್ಳಿಗಳು ಎಂದರೆ 1/4 ಭಾಗ ಪ್ರದೇಶ ಕರ್ನಾಟಕದಿಂದ ದೂರ ಉಳಿಯುತ್ತದೆ. ಈ 814 ಹಳ್ಳಿಗಳನ್ನು ಮಹಾರಾಷ್ಟ್ರ ಕೇಳಿದೆ. ಶೇ.70ರಷ್ಟು ಒಂದೇ ಭಾಷೆ ಮಾತನಾಡುವ ಜನರಿದ್ದರೆ ಆ ಭಾಷೆಗೆ ಆ ಪ್ರದೇಶ ಸೇರಬೇಕು. ಆದರೆ ಆ ಎಲ್ಲ ಪ್ರದೇಶಗಳಲ್ಲೂ ಕನ್ನಡಿಗರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಮಂಜುನಾಥ್ ಹೇಳಿದರು.

1956ರ ಮುಂಚೆ ಸಂಸತ್ತಿನಲ್ಲಿ ಚಂದಗಡ ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಒಂದು ಸಲ ತಿರಸ್ಕಾರವಾದರೆ ಅದು ತಿರಸ್ಕಾರನೆ ಆಗುತ್ತದೆ. 1950ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದಾಗ ಬೆಳಗಾವಿ ಭಾಗ ಅದರಡಿ ಬರುತ್ತಿತ್ತು ಎಂದು ಅವರು ತಿಳಿಸಿದರು.

ಯಾವುದೇ ಒಂದು ರಾಜ್ಯವನ್ನು ಭಾಷೆ ಮೇಲೆ ಒಡೆಯಬಾರದು. ಕರ್ನಾಟಕದಲ್ಲಿ ಮರಾಠಿಗರು, ಕನ್ನಡಿಗರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ತೆಲುಗು ಮಾತನಾಡುವರು ವಾಸಿಸುತ್ತಿದ್ದಾರೆ. ಅದೇ ರೀತಿ ಚಾಮರಾಜನಗರದಲ್ಲಿ ಮಲಯಾಳಂ ಮಾತನಾಡುವ ಜನರು ವಾಸಿಸುತ್ತಾರೆ. ಹಾಗಂತ ಆ ಪ್ರದೇಶಗಳನ್ನು ತಮಿಳುನಾಡು, ಕೇರಳಕ್ಕೆ ಸೇರಿಸಲು ಆಗುವುದಿಲ್ಲ ಮಂಜುನಾಥ್ ತಿಳಿಸಿದರು.

ನಾವು ಬಂದುತ್ವವನ್ನು ಸಾಧಿಸಬೇಕು. 2001ರಲ್ಲಿ ಹಾಗೂ 2011ರಲ್ಲಿ ಗಡಿ ಭಾಷೆಯ ಗಣತಿ ಮಾಡಿಸಿದಾಗ ಕನ್ನಡ ಮಾತನಾಡುವ ಜನರೆ ಹೆಚ್ಚಿಗೆ ಇದ್ದಾರೆ. ಬೆಳಗಾವಿಯ ಪ್ರದೇಶದ ಗಡಿ ಭಾಷಾ ಗಣತಿ ಪ್ರಕಾರ ಕೆಲವೇ ಕೆಲವು ಪ್ರದೇಶಗಳು ಹೊರತುಪಡಿಸಿ ಕನ್ನಡಿಗರೇ ಹೆಚ್ಚಿಗೆ ವಾಸಿಸುವ ಜನರಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಸರಕಾರ ಹಾಗೂ ನಮ್ಮ ಆಯೋಗ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಬೇಕು ಅದನ್ನು ಖಂಡಿತವಾಗಿಯೂ ಮಾಡುತ್ತದೆ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡಬೇಕು. ಕೋರ್ಟಿಗೆ ಹೋಗುವ ಅಧಿಕಾರ ಅವರಿಗೆ ಇದೆ. ಆದರೆ ತೀರ್ಮಾನ ಮಾಡುವ ಅಧಿಕಾರ ಅವರಿಗೆ ಇಲ್ಲ ಎಂದು ಮಂಜುನಾಥ್ ತಿಳಿಸಿದರು.

ಸಭೆಯಲ್ಲಿ ಗಡಿ ರಕ್ಷಣಾ ಆಯೋಗ ಸದಸ್ಯ ಎಸ್.ಎಂ ಕುಲಕರ್ಣಿ, ನ್ಯಾಯವಾದಿ ಜಿರ್ಲಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಎಸ್.ಎನ್.ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News