ರಾಜ್ಯದಲ್ಲಿರುವುದು ಚುನಾಯಿತ ಸರಕಾರವೇ? ಸರ್ವಾಧಿಕಾರಿ ಆಡಳಿತವೇ?: ಬಿಎಸ್ವೈಯನ್ನು ಕುಟುಕಿದ ಸಿದ್ದರಾಮಯ್ಯ
ಬೆಂಗಳೂರು, ಫೆ.4: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಲಿದೆ ಎಂದಿದ್ದ ಬಿಜೆಪಿ ನಾಯಕರೇ, ಈಗ ಪ್ರತಿಕ್ರಿಯಿಸಿ. ರಾಜ್ಯಕ್ಕೆ ಬರಬೇಕಾಗಿದ್ದ 30 ಸಾವಿರ ಕೋಟಿ ರೂ.ದುಡ್ಡನ್ನು ಕೇಂದ್ರ ಬಾಕಿ ಇಟ್ಟುಕೊಂಡಿದೆ. ರಾಜ್ಯ ದಿವಾಳಿ ಸ್ಥಿತಿಗೆ ತಲುಪಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟರ್ನಲ್ಲಿ ಟೀಕಿಸಿದ್ದಾರೆ.
ನಿಷೇಧಾಜ್ಞೆ ಹೇರಿ ಬಿಸಿಯೂಟ ಕಾರ್ಯಕರ್ತೆಯರ ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದೆ ಕಿರುಕುಳ ನೀಡುತ್ತಿರುವುದು ಖಂಡನೀಯ. ಜಿಲ್ಲಾ ಕೇಂದ್ರಗಳಲ್ಲಿಯೂ ಪೊಲೀಸರು ಕಾರ್ಯಕರ್ತೆಯರನ್ನು ಬೆದರಿಸುತ್ತಿರುವ ವರದಿಗಳು ಬರುತ್ತಿವೆ. ಯಡಿಯೂರಪ್ಪ ಅವರೇ, ರಾಜ್ಯದಲ್ಲಿರುವುದು ಚುನಾಯಿತ ಸರಕಾರವೇ? ಸರ್ವಾಧಿಕಾರಿ ಆಡಳಿತವೇ? ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಸರಕಾರ ಇದ್ದಾಗ ಪ್ರತಿಭಟನಾ ನಿರತ ಬಿಸಿಯೂಟ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಮಾಸಿಕ 500 ರೂ.ಗೌರವಧನ ಹೆಚ್ಚಿಸಿದ್ದೆ. ಪ್ರತಿಭಟನಕಾರರ ಮೇಲೆ ಪೊಲೀಸರನ್ನು ಛೂ ಬಿಟ್ಟಿರುವ ಈಗಿನ ಬಿಜೆಪಿ ಸರಕಾರಕ್ಕೆ ಕನಿಷ್ಠ ಅವರ ಅಹವಾಲನ್ನು ಆಲಿಸುವ ಮನುಷ್ಯತ್ವವೂ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.