ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೇ ಆಹಾರ ಧಾನ್ಯ ಪೂರೈಕೆ ಸ್ಥಗಿತ: ಸಚಿವೆ ಶಶಿಕಲಾ ಜೊಲ್ಲೆ

Update: 2020-02-04 17:16 GMT

ಬೆಂಗಳೂರು, ಫೆ.4: ತುಮಕೂರು ಸಿದ್ಧಗಂಗ ಮಠ ಸೇರಿದಂತೆ ಇನ್ನಿತರ ಆಶ್ರಮಗಳು, ವೃದ್ಧಾಶ್ರಮಗಳು, ಉಚಿತ ಊಟ ವಸತಿ ನೀಡುವ ಸಂಘ ಸಂಸ್ಥೆಗಳಿಗೆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೇ ಆಹಾರ ಧಾನ್ಯ ಪೂರೈಕೆ ಸ್ಥಗಿತಗೊಂಡಿತ್ತು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಜಾರಿಯಾಗಿದ್ದ ದಾಸೋಹ ಕಾರ್ಯಕ್ರಮವನ್ನು ಅದೇ ಸರಕಾರ ಸ್ಥಗಿತಗೊಳಿಸಿತ್ತು. ಆದರೆ, ಈ ಕುರಿತು ಮಾಜಿ ಸಚಿವ ಯು.ಟಿ ಖಾದರ್ ಮಾಡಿರುವ ಆರೋಪ ಆಧಾರ ರಹಿತವಾಗಿದೆ ಎಂದು ತಿಳಿಸಿದರು.

ರಾಜ್ಯದ 464 ಆಶ್ರಮಗಳು, ವೃದ್ಧಾಶ್ರಮಗಳು, ಸಂಘ, ಸಂಸ್ಥೆಗಳಿಗೆ ಅಕ್ಕಿ, ಗೋದಿ ಪೂರೈಕೆ ಮಾಡಲಾಗುತ್ತಿತ್ತು. ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅಕ್ಕಿ, ಗೋದಿ ಪೂರೈಕೆ ನಿಂತಿದೆ ಎಂಬ ಖಾದರ್ ಆರೋಪ ಸುಳ್ಳು. ತಾವು ಸಚಿವೆ ಆಗುವುದಕ್ಕಿಂತ ಮುನ್ನವೇ ಆಹಾರ ಧಾನ್ಯ ಪೂರೈಕೆ ನಿಂತಿತ್ತು ಎಂದು ತಿಳಿಸಿದರು.

ದಾಸೋಹ ಕಾರ್ಯಕ್ರಮಕ್ಕಾಗಿ ವಾರ್ಷಿಕ 12.50 ಕೋಟಿ ರೂ. ವೆಚ್ಚವಾಗುತ್ತಿತ್ತು. ವಿವಿಧ ಮಠಗಳು ಮತ್ತು ಸಂಘ ಸಂಸ್ಥೆಗಳು ಮನವಿ ಮೇರೆಗೆ ಅಕ್ಕಿ ಗೋಧಿ ಕೊಡಲು ಮುಂದಾಗುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪಅವರ ಜೊತೆ ಚರ್ಚಿಸಿ ಆಹಾರ ಧಾನ್ಯಗಳ ಪೂರೈಕೆಗೆ ಕ್ರಮ ಕೈಗೊಂಡು ಮಠಗಳು, ಸಂಘ ಸಂಸ್ಥೆಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News