126 ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ಸ್ಥಗಿತ: ಕಾರಣವೇನು ಗೊತ್ತೇ ?

Update: 2020-02-04 18:16 GMT

ಬೆಂಗಳೂರು, ಫೆ.4: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚನೆಯಂತೆ ಮೊದಲ ಹಂತವಾಗಿ 4ರಿಂದ 5 ಮಂದಿ ಅಥವಾ ಬೆರಳೆಣಿಕೆಯ ಪ್ರಯಾಣಿಕರನ್ನು ಹೊತ್ತು ಮೈಸೂರು- ಬೆಂಗಳೂರು, ಹಾಸನ- ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ 126 ಬಸ್ಸುಗಳ ಸೇವೆಯನ್ನು ಕೆಎಸ್‌ಆರ್‌ಟಿಸಿ ಮಂಗಳವಾರ ಸ್ಥಗಿತಗೊಳಿಸಿದೆ.

ಕೆಎಸ್‌ಆರ್‌ಟಿಸಿ ಈಗಾಗಲೇ ನಷ್ಟದಲ್ಲಿದ್ದು, ಇಂಧನಕ್ಕೆ ಮತ್ತು ಬಸ್ಸುಗಳ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ಸಾರಿಗೆ ಸಚಿವರ ಸೂಚನೆಯಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ರಾಜ್ಯದ ಎಲ್ಲಾ ವಿಭಾಗದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಒಟ್ಟು 126 ಬಸ್ಸುಗಳ ಸಂಚಾರ ರದ್ದುಗೊಳಿಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸ್ಯಾಟಲೈಟ್ ನಿಲ್ದಾಣದಲ್ಲಿ ಕೆಲ ಚಾಲಕ, ನಿರ್ವಾಹಕರು ಕೆಲ ಬಸ್‌ಗಳಲ್ಲಿ 4ರಿಂದ 5 ಜನ ಪ್ರಯಾಣಿಕರಿದ್ದರೆ ಸಾಕು ಎಂದು ಬಸ್ಸಿನಲ್ಲಿ ಸಂಚರಿಸುತ್ತಾರೆ. ಜೊತೆಗೆ ಪ್ಲಾಟ್ ಫಾರಂನಲ್ಲಿ ಬಸ್ ನಿಲ್ಲಿಸುವ ಜಾಗಕ್ಕಾಗಿ ಚಾಲಕರ ನಡುವೆ ಜಗಳ ನಡೆಯುತ್ತಲೇ ಇರುತ್ತದೆ. ಇದನ್ನು ಮನಗಂಡ ಕೆಎಸ್‌ಆರ್‌ಟಿಸಿ ಮೈಸೂರು-ಬೆಂಗಳೂರು ಮತ್ತು ಹಾಸನ-ಬೆಂಗಳೂರು ನಡುವಿನ 126 ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

ಮೊದಲ ಹಂತದಲ್ಲಿ ಮೈಸೂರು-ಬೆಂಗಳೂರು, ಹಾಸನ-ಬೆಂಗಳೂರು ಮಾರ್ಗದಲ್ಲಿ ಖಾಲಿ ಸಂಚರಿಸುವ ಬಸ್ಸುಗಳ ಸೇವೆಯನ್ನು ರದ್ದು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮಾರ್ಗಗಳಿಗೂ ಇದು ಅನ್ವಯಗೊಳ್ಳುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News