ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ಕಸಾಪ ರಾಜ್ಯಾಧ್ಯಕ್ಷರ ರಾಜೀನಾಮೆಗೆ ಕೆ.ನೀಲಾ ಆಗ್ರಹ

Update: 2020-02-05 17:56 GMT
ಫೈಲ್ ಚಿತ್ರ

ಕಲಬುರಗಿ, ಫೆ.5: 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಮಾಜಿಕ ಹೋರಾಟಗಾರ್ತಿ ಹಾಗೂ ಚಿಂತಕಿ ಕೆ.‌ನೀಲಾ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಲ್ಲದೆ, ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿನ ಗುಲಬರ್ಗಾ ವಿವಿಯ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ನಡೆದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನದ ಸಮಾರಂಭದಲ್ಲಿ ಮಾತನಾಡಿದ ನೀಲಾ ಅವರು, ಆಳುವ ವರ್ಗದ ಅಡಿಯಾಳಿನಂತೆ ವರ್ತಿಸಿ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡಿರುವ ಅಧ್ಯಕ್ಷ ಮನು ಬಳಿಗಾರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಅಂದು ಇಂದು ಮುಂದು ಎಂಬ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಅವರು, ಪರಿಷತ್ತಿನ ಅಧ್ಯಕ್ಷರು ಶೃಂಗೇರಿ ಸಮ್ಮೇಳನಕ್ಕೆ ತೆರಿಗೆ ಹಣವನ್ನು ನೀಡಲಿಲ್ಲ. ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿದ ಚುನಾಯಿತ ಜಿಲ್ಲಾ ಘಟಕದ ಆಯ್ಕೆಯ ಪರವಾಗಿ ನಿಲ್ಲಲಿಲ್ಲ. ಹಾಗೆಯೇ ಆಳುವ ವರ್ಗದ ಪರವಾಗಿ ನಿಂತು ಸಮಜಾಯಿಷಿ ನೀಡಬೇಕಿರಲಿಲ್ಲ ಎಂದು ಟೀಕಿಸಿದರು.

ಆಳುವ ವರ್ಗ ಅಧಿಕಾರ ನಡೆಸಬೇಕೇ ಹೊರತು ಪರಿಷತ್ತಿನ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಸರ್ವಾಧಿಕಾರಿಯಂತೆ ವರ್ತಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಪೆಟ್ರೋಲ್‌ ಬಾಂಬ್‌ ಹಾಕುತ್ತೇವೆ ಎಂದು ಬೆದರಿಸುವವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ಫ್ಯಾಸಿಸ್ಟ್‌ ಧೋರಣೆಯನ್ನು ಖಂಡಿಸುತ್ತೇನೆ. ಕವಿತೆ ವಾಚಿಸಿದ್ದಕ್ಕಾಗಿ ಕವಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಹಾರುವ ಹಕ್ಕಿಗೆ ಬಂಧನ ಹಾಕುವ ಹಾಗಿಲ್ಲ. ಕೂಡಲೇ ಸರ್ಕಾರವು ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು

ಇದೇ ವೇಳೆ ಬೀದರ್‌ ಶಾಹೀನ್‌ ಶಾಲೆಯ ಪ್ರಕರಣವನ್ನು ಪ್ರಸ್ತಾಪಿಸಿದ ಅವರು 'ಪೊಲೀಸರು ಐದೈದು ಬಾರಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ನಡವಳಿಕೆ ಮತ್ತು ಸರ್ಕಾರದ ನಿಲುವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ನೀಲಾ ಅವರ ಮಾತಿಗೆ ಸಭೆಯಲ್ಲಿದ್ದ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಭಾರೀ ಕರತಾಡನದ ಮೂಲಕ ನೀಲಾ ಅವರ ನಿಲುವನ್ನು ಚಪ್ಪಾಳೆ ತಟ್ಟಿ ಸಭಿಕರು ಬೆಂಬಲಿಸಿದರು. ಇದು ವೇದಿಕೆ ಮೇಲಿದ್ದ ಸರ್ಕಾರದ ಪ್ರತಿನಿಧಿಗಳಿಗೆ ಭಾರೀ ಮುಜುಗರ ಉಂಟುಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News