ಮಲಪ್ರಭಾ ನದಿ ನೀರು ಸರಬರಾಜು ಯೋಜನೆ ಶೀಘ್ರ ಜಾರಿಗೆ ಕ್ರಮ: ಸಚಿವ ಜಗದೀಶ್ ಶೆಟ್ಟರ್

Update: 2020-02-08 15:43 GMT

ಧಾರವಾಡ, ಫೆ.8: ಧಾರವಾಡ ಜಿಲ್ಲೆಯಲ್ಲಿ ಈಗಾಗಲೆ ಮಲಪ್ರಭಾ ಜಲಾಶಯದ ನೀರು ಪಡೆಯುತ್ತಿರುವ ಹಳ್ಳಿಗಳು ಸೇರಿದಂತೆ ಜಿಲ್ಲೆಯ 399 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ಮಲಪ್ರಭಾ ನದಿಯ ನೀರು ಸರಬರಾಜು ಮಾಡಲು 1,300 ಕೋಟಿ ರೂ.ಅಂದಾಜು ಮೊತ್ತದ ಸಮಗ್ರ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಶನಿವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಅಮ್ಮಿನಭಾವಿಯಲ್ಲಿ ನಿರ್ಮಿಸಿರುವ 40 ಎಮ್‌ಎಲ್‌ಡಿ ಸಾಮರ್ಥ್ಯದ ನೂತನ ಜಲಶುದ್ಧೀಕರಣ ಘಟಕದ ಉದ್ಘಾಟನೆ ಹಾಗೂ ಯಂತ್ರಾಗಾರದಲ್ಲಿ ಅಳವಡಿಸಿರುವ ನೂತನ ಯಂತ್ರೋಪಕರಣಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಠೇವಣಿ ಹಣದಲ್ಲಿನ 26 ಕೋಟಿ ರೂ.ಅನುದಾನದಲ್ಲಿ ಅನುಷ್ಠಾನಗೊಳಿಸಿರುವ ಈ ನೂತನ ಜಲಶುದ್ಧೀಕರಣ ಘಟಕ ಯೋಜನೆಯು ಅತ್ಯಂತ ಮಹತ್ವದ್ದಾಗಿದ್ದು ಮಹಾನಗರಕ್ಕೆ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸಲು ಅನುಕೂಲವಾಗಲಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು. ಮಹಾನಗರದ ಒಟ್ಟು 64 ವಾರ್ಡ್‌ಗಳ ಪೈಕಿ ಈಗಾಗಲೇ 11 ವಾರ್ಡ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ಮತ್ತು 15 ವಾರ್ಡ್‌ಗಳ ಭಾಗಶಃ ಪ್ರದೇಶಕ್ಕೆ ನಿರಂತರ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎಲ್ಲ ವಾರ್ಡುಗಳಿಗೂ ನಿರಂತರ ನೀರು ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಹಾನಗರದ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಸರಬರಾಜು ಮಾಡಲು ಪ್ರತಿ ದಿನಕ್ಕೆ ಸುಮಾರು 200 ಎಮ್‌ಎಲ್‌ಡಿ ನೀರಿನ ಅಗತ್ಯವಿದೆ. ಹುಬ್ಬಳ್ಳಿ ಮಹಾನಗರಕ್ಕೆ ನೀರಸಾಗರ ಜಲಾಶಯದಿಂದ ಸುಮಾರು 40 ಎಮ್‌ಎಲ್‌ಡಿ ನೀರನ್ನು ಪಡೆಯಲಾಗುತ್ತಿತ್ತು. ಆದರೆ ಜಲಾಶಯ ಬತ್ತಿದ್ದರಿಂದ ಮಲಪ್ರಭಾ ಜಲಾಶಯದಿಂದ ಪಡೆಯುತ್ತಿದ್ದ 160 ಎಮ್‌ಎಲ್‌ಡಿ ನೀರಿನ ಮೇಲೆ ಅವಳಿ ನಗರ ಅವಲಂಬಿಸಬೇಕಾಯಿತು ಎಂದು ಜಗದೀಶ್ ಶೆಟ್ಟರ್ ಹೇಳಿದರು. ಇದರಿಂದಾಗಿ ಬೇಸಿಗೆ ಕಾಲದಲ್ಲಿ 8-10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕಾಯಿತು. ಈ ಸಮಸ್ಯೆ ಪರಿಹರಿಸಲು ಸುಮಾರು 26 ಕೋಟಿ ರೂ.ಮೊತ್ತದಲ್ಲಿ ಮಲಪ್ರಭಾ ಜಲಾಶಯದಿಂದ ನೀರು ತರಲು ಸವದತ್ತಿ ಜಾಕ್ವೇಲ್ ಹಾಗೂ ಅಮ್ಮಿನಭಾವಿ ಪಂಪ್‌ಹೌಸ್ ಹೊಸ ಯಂತ್ರೋಪಕರಣ, ಪಂಪ್‌ಸೆಟ್‌ಗಳ ಅಳವಡಿಕೆ ಹಾಗೂ ಅಮ್ಮಿನಭಾವಿಯಲ್ಲಿ 40 ಎಮ್‌ಎಲ್‌ಡಿ ಸಾಮರ್ಥ್ಯದ ಹೊಸ ಜಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ಅವಳಿ ನಗರದಲ್ಲಿ ಅನುಷ್ಠಾನದಲ್ಲಿರುವ ಕೇಂದ್ರ ಸರಕಾರದ ಅಮೃತ ಯೋಜನೆಯ ಮೊದಲ ಹಂತ ಅನುಷ್ಠಾನದಲ್ಲಿದ್ದು, ಎಲ್ಲ ಮನೆಗಳಿಗೂ ಅಮೃತ ಯೋಜನೆಯಡಿ ಸಂಪರ್ಕ ಕಲ್ಪಿಸಲು ಹೆಚ್ಚುವರಿಯಾಗಿ 2ನೇ ಹಂತದಲ್ಲಿ 400 ಕೋಟಿ ರೂ.ಮೊತ್ತದ ಪ್ರಸ್ತಾವನೆಯಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಮೂಲಕ ಎಲ್ಲ ಕಾಲದಲ್ಲೂ ನೀರು, ಭೂಮಿ, ಹಸಿರು ಸಮೃದ್ಧವಾಗಿ ಸಿಗುವಂತೆ ಕಾಳಜಿ ವಹಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನೀರು ಅಮೃತಕ್ಕೆ ಸಮಾನ. ಅದನ್ನು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಮಳೆ ಕೊಯ್ಲು, ಜಲ ಮರುಪೂರಣ ಮುಂತಾದ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು.

ಕೇಂದ್ರ ಸರಕಾರವು ‘ಹರ್ ಘರ್-ನಲ್ ಜಲ್’ ಯೋಜನೆಯಡಿ ರಾಜ್ಯ ಸರಕಾರಗಳ ಸಹಯೋಗದಲ್ಲಿ 3.5 ಲಕ್ಷ ಕೋಟಿ ರೂ.ಅನುದಾನವನ್ನು ನೀಡಲು ಯೋಜನೆ ರೂಪಿಸಿದೆ. ಈ ಯೋಜನೆಯಡಿ 2024 ರೊಳಗಾಗಿ ಪ್ರತಿ ವ್ಯಕ್ತಿಗೆ ಪ್ರತಿ ದಿನಕ್ಕೆ ಸರಿಸುಮಾರು 50 ಲೀಟರ್ ನೀರು ಪೂರೈಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ್, ಜಿಲ್ಲಾಧಿಕಾರಿ ದೀಪಾ ಚೋಳನ್, ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಎಂಜಿನಿಯರ್‌ಗಳು, ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News