ಖಾತೆಗಾಗಿ ಒತ್ತಡ ಹಾಕಿರಲಿಲ್ಲ: ನೂತನ ಸಚಿವ ಬಿ.ಎ.ಬಸವರಾಜ
Update: 2020-02-10 18:18 GMT
ಬೆಂಗಳೂರು, ಫೆ.10: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ. ಇದೊಂದು ದೊಡ್ಡ ಖಾತೆಯಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ನೂತನ ಸಚಿವ ಬಿ.ಎ.ಬಸವರಾಜ(ಭೈರತಿ) ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇಂತಹದೆ ಖಾತೆ ಬೇಕು ಎಂದು ಮುಖ್ಯಮಂತ್ರಿ ಅಥವಾ ಯಾರ ಮೇಲೂ ಒತ್ತಡ ಹಾಕಿರಲಿಲ್ಲ. ಕೆಲವೊಂದು ಕಾರಣಗಳಿಂದಾಗಿ ಖಾತೆಗಳ ಹಂಚಿಕೆ ವಿಳಂಬವಾಯಿತು ಎಂದರು.
ಒಂದು ಮನೆ ಎಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಮುಖ್ಯಮಂತ್ರಿ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಬಸವರಾಜ ಹೇಳಿದರು.