×
Ad

ದೇಶಾದ್ಯಂತ ಡಿಎನ್‍ಎ ಆಧಾರಿತ ಎನ್‌ಆರ್‌ಸಿ ನಡೆಯಲಿ: ವಾಮನ್ ಮೆಶ್ರಾಂ

Update: 2020-02-12 21:32 IST

ಮಂಡ್ಯ, ಫೆ.12: ದೇಶಾದ್ಯಂತ ಡಿಎನ್‍ಎ ಆಧಾರಿತ ಎನ್‌ಆರ್‌ಸಿ ಮಾಡಿಸಿ, ಪ್ರತಿ ಭಾರತೀಯ ಪ್ರಜೆಗಳನ್ನು ಸಮಾನತೆಯಡೆಗೆ ಸಾಗಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಬೇಕು ಎಂದು ಬಹುಜನ ಕ್ರಾಂತಿ ಮೋರ್ಚಾ ರಾಷ್ಟ್ರೀಯ ಸಂಯೋಜಕ ವಾಮನ್ ಮೆಶ್ರಾಂ ಒತ್ತಾಯಿಸಿದ್ದಾರೆ.

ಇವಿಎಂ ರಹಸ್ಯ ಹಗರಣ ಬಯಲು, ಸಿಎಎ ಷಡ್ಯಂತ್ರ ಹಾಗೂ ಡಿಎನ್‍ಎ ಆಧಾರಿತ ಎನ್‌ಆರ್‌ಸಿ ಮಾಡಬೇಕೆಂದು ಆಗ್ರಹಿಸಿ ಬಹುಜನ ಕ್ರಾಂತಿ ಮೋರ್ಚಾ ಹಾಗೂ ಮಂಡ್ಯದ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ವಿರೋಧಿ ಸಿಎಎ ಕಾಯ್ದೆ ಕೈಬಿಡಬೇಕು, ಇವಿಎಂ ಬದಲಿಗೆ ಬ್ಯಾಲೆಟ್‍ ಪೇಪರ್ ಪದ್ದತಿ ಜಾರಿಗೆ ತರಬೇಕು, ಹಿಂದುಳಿದ ವರ್ಗಗಳ ಜಾತಿ ಆಧಾರಿತ ಜನಗಣತಿ ಕಾರ್ಯ ಮಾಡಬೇಕು, ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ, ಬೌದ್ಧ, ಸಿಖ್, ಕ್ರೈಸ್ತ ಹಾಗೂ ಲಿಂಗಾಯತ ಸಮುದಾಯದ ಜನರ ಸಂರಕ್ಷಣೆಗಾಗಿ ಕಮ್ಯುನಲ್ ವಯಲೆನ್ಸ್ ಪ್ರಿವೆನ್ಷನ್ ಆ್ಯಕ್ಟ್ ಜಾರಿ ಮಾಡಬೇಕು ಎಂದು ಅವರು ಹೇಳಿದರು. ಇತರೆ ಹಿಂದುಳಿದ ವರ್ಗಗಳ ಜಾತಿಯಾಧಾರಿಕತ ಜನಗಣತಿ ಆಗಬೇಕು. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಜಾರಿಮಾಡಬೇಕು ಎಂದು ಅವರು ಆಗ್ರಹಿಸಿದರು.

ರಾಷ್ಟ್ರೀಯ ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಕಾಸ್ ಚೌಧರಿ ಮಾತನಾಡಿ, ವಿದೇಶದಿಂದ ವಲಸೆ ಬಂದ ಆರ್ಯನ್ನರು ಈ ದೇಶದ ಮೂಲನಿವಾಸಿಗಳಾದ ಆದಿವಾಸಿ, ದಲಿತ ಹಾಗೂ ಹಿಂದುಳಿದ ವರ್ಗದ ಜನರನ್ನು ಗುಲಾಮಗಿರಿಗೆ ನೂಕಲು ಯತ್ನಿಸುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಮತ್ತು ವಿವಿಧ ಸಂಘಟನೆಗಳ ಮುಖಂಡರಿಗೆ ಸಂವಿಧಾನದ ಪೀಠಿಕೆಯ ಪ್ರಸ್ತಾವನೆಯನ್ನು ಓದಿ ಪ್ರಮಾಣ ಸ್ವೀಕರಿಸಿವ ಮೂಲಕ ಆಶಯಗಳ ರಕ್ಷಣೆಗೆ ಮುಂದಾಗುವಂತೆ ಸಂಕಲ್ಪ ಕೈಗೊಳ್ಳಲಾಯಿತು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನ ಅಬ್ದುಲ್ ಹಮೀದ್ ಅಝಹರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ಗಣಿಗ ರವಿಕುಮಾರ್, ಸಿದ್ದರಾಮೇಗೌಡ, ಮೋರ್ಚಾದ ಜಿಲ್ಲಾ ಸಂಯೋಜಕ ಕೆ.ರಾಮಯ್ಯ, ಸಂವಿದಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಮುನಾವರ್ ಖಾನ್, ಮುಹಮ್ಮದ್ ತಾಹೀರ್, ನದೀಂ ಅಹ್ಮದ್, ಸಿಐಟಿಯುನ ಸಿ.ಕುಮಾರಿ, ಪ್ರಗತಿಪರ ಹೋರಾಟಗಾರ, ಪತ್ರಕರ್ತ ಎಂ.ಬಿ.ನಾಗಣ್ಣಗೌಡ, ಗಂಗರಾಜು, ಡೇವಿಡ್, ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News