×
Ad

ಹಿಂದೆ ನಾನು ಗಾಂಧಿ ಪುಸ್ತಕ ಓದುತ್ತಿದ್ದಾಗ ಅಳುತ್ತಿದ್ದೆ: ಸಚಿವ ಸಿ.ಟಿ.ರವಿ

Update: 2020-02-14 21:59 IST

ಮೈಸೂರು,ಫೆ.14: ಇನ್ನು ಕೆಲವೇ ವರ್ಷಗಳಲ್ಲಿ ಮಹಾತ್ಮ ಗಾಂಧಿ ಅಂತರಾಷ್ಟ್ರೀಯ ದೇವರಾಗುತ್ತಾರೆ, ಅಂಬೇಡ್ಕರ್ ರಾಷ್ಟ್ರೀಯ ದೇವರಾಗುತ್ತಾರೆ. ಯಾಕೆಂದರೆ ನಾವೆಲ್ಲರೂ ಅವರ ಕಲ್ಲು ಮುಳ್ಳಿನ ದಾರಿಯಲ್ಲಿ ನಡೆಯಲಾಗದೆ ಅವರನ್ನು ದೇವರನ್ನಾಗಿ ಮಾಡಿಬಿಡುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ರಂಗಾಯಣದಲ್ಲಿ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ರಂಗಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ನಾನು ಹಿಂದೆ ದೂರ ಪ್ರಯಾಣ ಮಾಡುತ್ತಿದ್ದಾಗ ಗಾಂಧಿ ಕುರಿತ ಪುಸ್ತಕ ಓದುತ್ತಿದ್ದೆ. ನನಗೆ ಗೊತ್ತಾಗದಂತೆ ನಾನು ಅಳುವುದಕ್ಕೆ ಶುರು ಮಾಡಿದ್ದೆ. ಪಕ್ಕದಲ್ಲಿದ್ದವರು ಯಾಕೆ ಅಂತ ಕೇಳಿದರು. ಗಾಂಧಿ ನಿಜಕ್ಕೂ ಜಗತ್ತಿನಲ್ಲೇ ಮಹಾತ್ಮರಾದರು. ಅವರಂತೆ ನಡೆಯಲು ನಮಗೆ ಆಗುವುದಿಲ್ಲವಲ್ಲ ಅಂತ ಹೇಳಿದೆ. ನಮ್ಮ ದೇಶದಲ್ಲಿ ಗಾಂಧಿಯನ್ನು ದೇವರನ್ನಾಗಿಸಿ ಅವರಿಗೆ ಪೂಜೆ ಮಾಡಿ, ನೈವೇದ್ಯ ಇಟ್ಟು ಬಳಿಕ ಆ ನೈವೇದ್ಯವನ್ನು ತಿಂದುಬಿಟ್ಟಿದ್ದಾರೆ ಎಂದು ಸಿ.ಟಿ ರವಿ ಹೇಳಿದರು.

ಗಾಂಧಿ ಸವೆಸಿದ ಕಲ್ಲು ಮುಳ್ಳಿನ ಹಾದಿಯಲ್ಲಿ ನಾವು ನಡೆಯದಿದ್ದಾಗ ದೇವರನ್ನಾಗಿಸುತ್ತೇವೆ. ಹಾಗಾಗಿಯೇ ಗಾಂಧಿ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ದೇವರಾಗುತ್ತಾರೆ. ಅವರು ಹಾಡುತ್ತಿದ್ದ ಭಜನೆಗಳು ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ಹಾಡಿದರೆ ಧರ್ಮದ ಸಂಘರ್ಷವೇ ಇರುವುದಿಲ್ಲ. ರಂಗಭೂಮಿ ಎಲ್ಲರನ್ನೂ ಒಟ್ಟುಗೂಡಿಸುವ ವೇದಿಕೆಯಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಗಾಂಧಿ ತತ್ವದ ಕೋತಿಗಳಿಗೆ ಖಾದಿ ಮಾಲಾರ್ಪಣೆ ಮಾಡುವ ಮೂಲಕ ಹಿರಿಯ ನಟ ಅನಂತ್‍ನಾಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಜಯಕುಮಾರ್ ಪಾಲ್ಗೊಂಡಿದ್ದರು.

ಡೈಲಾಗ್, ಹಾಡು ಹೇಳಿ ರಂಜಿಸಿದ ನಟ ಅನಂತ್‍ನಾಗ್
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಿದ ಹಿರಿಯ ನಟ ಅನಂತ್‍ನಾಗ್ ಸಿನಿಮಾ ಸಂಭಾಷಣೆ ಮತ್ತು 'ಭಾಗ್ಯದ ಲಕ್ಷ್ಮೀ ಬಾರಮ್ಮ' ಹಾಡು ಹೇಳುವ ಮೂಲಕ ರಂಜಿಸಿದರು. ಅಲ್ಲದೆ ರಂಗಾಯಣದ ಜತೆ ಇದ್ದ ಒಡನಾಟ ಹಂಚಿಕೊಂಡ ಅನಂತ ನಾಗ್, 'ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಈ ರಂಗಾಯಣ ಸ್ಥಾಪಿಸಿದರು. ಬಿ.ವಿ. ಕಾರಂತರ ಜತೆ ಇಲ್ಲಿಗೆ ಬಂದಿದ್ದೆ. ನಂತರ ಪ್ರಸನ್ನ ಚಿಣ್ಣರ ಮೇಳಕ್ಕೆ ಕರೆಸಿದ್ದರು. ಈಗ ಕಾರ್ಯಪ್ಪ ನಾಟಕೋತ್ಸವ ಉದ್ಘಾಟನೆಗೆ ಕರೆಸಿದ್ದಾರೆ. ನನಗೆ ಸಂತೋಷವಾಗಿದೆ. ನಾನು ಆನಂದಾಶ್ರಮದಲ್ಲಿ ಬೆಳೆದಿದ್ದರಿಂದ ಗಾಂಧಿಯನ್ನು ಆಗ ಓದಿಕೊಂಡಿದ್ದೆ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News