ಅಪರಾಧ ಮುಕ್ತ ರಾಜಕೀಯದ ಕುರಿತ ಸುಪ್ರೀಂ ಆದೇಶ ಸ್ವಾಗತಾರ್ಹ ಕ್ರಮ: ಚುನಾವಣಾ ಆಯೋಗ
Update: 2020-02-14 17:20 GMT
ಹೊಸದಿಲ್ಲಿ, ಫೆ.14: ರಾಜಕೀಯ ಕ್ಷೇತ್ರವನ್ನು ಅಪರಾಧಮುಕ್ತಗೊಳಿಸುವ ಕುರಿತು ಸುಪ್ರೀಂಕೋರ್ಟ್ ನೀಡಿರುವ ಹೇಳಿಕೆಯನ್ನು ಮುಕ್ತ ಹೃದಯದಿಂದ ಸ್ವಾಗತಿಸುವುದಾಗಿ ಚುನಾವಣಾ ಆಯೋಗ ಹೇಳಿದೆ. ಈ ಆದೇಶದಿಂದ ಚುನಾವಣಾ ಪ್ರಜಾತಂತ್ರವನ್ನು ಸುಧಾರಿಸಲು ಹೊಸ ನೈತಿಕ ಮಾನದಂಡ ರೂಪಿಸಲು ಸಾಧ್ಯವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ದೇಶದ ಚುನಾವಣಾ ಪ್ರಜಾತಂತ್ರ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಈ ಆದೇಶದಿಂದ ಪ್ರೇರಣೆ ದೊರಕಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ರಾಜಕೀಯ ಕ್ಷೇತ್ರವನ್ನು ಅಪರಾಧ ಮುಕ್ತಗೊಳಿಸುವ ನಿಟ್ಟಿನಲ್ಲಿ ಗುರುವಾರ ಮಹತ್ವದ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಯ ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿವರವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕೆಂದು ಸೂಚಿಸಿತ್ತು.