ಮೌಢ್ಯಗಳನ್ನು ದೂರವಿಟ್ಟಿದ್ದು ಲಿಂಗಾಯತ ಧರ್ಮ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-02-16 15:20 GMT

ಬೆಂಗಳೂರು, ಫೆ.16: ವೈದಿಕ ಧರ್ಮಕ್ಕೆ ಪರ್ಯಾಯವಾಗಿ, ವೈಚಾರಿಕವಾಗಿ, ಧರ್ಮಾತೀತವಾಗಿ ಮತ್ತು ಜಾತ್ಯತೀತ, ಕರ್ಮ ಸಿದ್ಧಾಂತ, ಕಂದಾಚಾರ, ಮೌಢ್ಯಗಳನ್ನು ದೂರವಿಟ್ಟ ಧರ್ಮ ಎಂದರೆ ಅದು ಬಸವಾದಿ ಶಿವಶರಣರ ಲಿಂಗಾಯತ ಧರ್ಮ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ರವಿವಾರ ತುಮಕೂರು ರಸ್ತೆಯಲ್ಲಿರುವ ಮಾದಾವರದ ಬಿಐಇಸಿ ಮೈದಾನದಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಬಸವ ಕೇಂದ್ರಗಳು, ಬಸವ ಸಂಘಟನೆಗಳು ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಿದ್ದ ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಸವಣ್ಣನವರ ಕಾಲದಲ್ಲಿ ಮಾಡಿದ ಅಸಂಖ್ಯ ಪ್ರಮಥರ ಗಣಮೇಳವನ್ನು ಇಂದು ಶಿವಮೂರ್ತಿ ಶರಣರು ಮರುಕಳಿಸಿದ್ದಾರೆ. ಶ್ರೀಗಳ ಈ ಪ್ರಯತ್ನ ಇಡೀ ಸಮಾಜದ ಶ್ಲಾಘನೆಗೆ ಪಾತ್ರವಾಗಿದೆ. 900 ವರ್ಷಗಳ ನಂತರ ಇಂಥದ್ದೊಂದು ಮಹತ್ವದ ಬದಲಾವಣೆ ಕಂಡುಬಂದಿದೆ. ಜಗತ್ತಿನ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಇಂತಹ ಸಮಾವೇಶಗಳು ಅವಶ್ಯ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ದೇಶ ಅನೇಕ ಜನ ಸಮಾಜ ಸುಧಾರಕರನ್ನು, ದಾರ್ಶನಿಕರನ್ನು, ಸಂತರನ್ನು, ಶರಣರನ್ನು, ಸೂಫಿಗಳನ್ನು ನೀಡಿದೆ. ಅವರೆಲ್ಲಾ ಸಮಾಜದ ಪರಿವರ್ತನೆಗೆ, ಬದಲಾವಣೆಗೆ, ಮಾನವೀಯ ಮೌಲ್ಯಗಳ ಸ್ಥಾಪನೆಗೆ ಶತಮಾನಗಳಿಂದ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಜಾತಿ ವ್ಯವಸ್ಥೆಯನ್ನು, ಅಸಮಾನತೆಯನ್ನು ತೊಡೆದು ಹಾಕಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.

‘ಇವನಾರವ ಇವನಾರವ’ ಎಂದು ಕೇಳುತ್ತಿರುವ ಇಂದಿನ ದಿನಗಳಲ್ಲಿ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಚನಗಳು ಪಠಣ ಮಾಡಲಿಕ್ಕೆ ಅಲ್ಲ. ನುಡಿದಂತೆ ನಡೆದವರು ಬಸವಾದಿ ಶರಣರು. ಸಮಾಧಾನಕರವಾಗಿ ಬಾಳಿದರೆ ಅದು ಸಾರ್ಥಕ. ಇಲ್ಲದಿದ್ದರೆ ನಿರರ್ಥಕ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸಂವಿಧಾನದಲ್ಲಿ ಭೇದ ಭಾವಗಳಿಗೆ ಆಸ್ಪದವಿಲ್ಲ. ಅದು ಧರ್ಮನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಸಾರುತ್ತದೆ. ಇದರಲ್ಲಿ ಅಗೌರವ, ಅಸಮಾನತೆಗೆ ಆಸ್ಪದವಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಶಿವಮೂರ್ತಿ ಮುರುಘಾ ಶರಣರು ನನಗೆ ನೈತಿಕ ಸ್ಥೈರ್ಯ ತುಂಬಿದ ಸ್ವಾಮೀಜಿಗಳ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ. ನನ್ನ ಅಹಿಂದ ಸಮಾವೇಶಗಳ ಕಾಲದಿಂದಲೂ ಅವರು ನನಗೆ ಶಕ್ತಿ ತುಂಬಿದವರು. ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಮರಸಿಕೊಂಡರು.

ಇಂದು ಅಸಮಾನತೆ, ಬಡತನ, ಭೇದ ಭಾವ, ತಾರತಮ್ಯ, ಸಾಮಾಜಿಕ ಅಸಮಾನತೆ ಇದೆ. ಯಾಕೆ ಸಮಾನತೆ ಬಂದಿಲ್ಲ ಎಂದರೆ, ಜಾತಿ ವ್ಯವಸ್ಥೆ ಅದಕ್ಕೆ ಅಡ್ಡಿಯಾಗಿದೆ. ಅದಕ್ಕೆ ಚಲನೆ ನೀಡಬೇಕಿದೆ. ಸಮಸಮಾಜ ನಿರ್ಮಾಣ ವಾಗಬೇಕಾದರೆ ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾನತೆ ಸಾಧಿಸಬೇಕು ಎಂದು ಅವರು ಹೇಳಿದರು.

ನಾನು ಬಸವ ತತ್ವಗಳನ್ನು ಅನುಸರಿಸುವವನು ಹಾಗೂ ಅವರ ಸಿದ್ಧಾಂತಗಳ ಪ್ರತಿಪಾದಕ. ಜಾತಿ ಧರ್ಮಗಳ ಸಂಘರ್ಷಗಳಿಂದ ಕೂಡಿರುವ ಇಂದಿನ ಸಮಾಜಕ್ಕೆ ಬಸವಾದಿ ಶರಣರು ಮಾದರಿಯಾಗಬೇಕು. ಆಗ ಸಮಸಮಾಜ ಸ್ಥಾಪನೆ ಸಾಧ್ಯ. ಇಂದು ಜಾತಿ ವ್ಯವಸ್ಥೆ ಗಟ್ಟಿಯಾಗಿ ಕೂತಿದೆ. ಇದು ಹೋಗಬೇಕು. ಇದಕ್ಕಾಗಿ ಇಂತಹ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News