ದುಷ್ಟರಿಗೆ ಶಿಕ್ಷೆ- ಶಿಷ್ಟರಿಗೆ ರಕ್ಷಣೆ ನ್ಯಾಯಾಲಯದ ಮುಖ್ಯ ಧ್ಯೇಯ: ನ್ಯಾ.ಕೆ.ಎನ್.ಫಣೀಂದ್ರ

Update: 2020-02-16 17:32 GMT

ಗದಗ, ಫೆ.16: ದುಷ್ಟರ ಸಂಹಾರ ಶಿಷ್ಟರ ರಕ್ಷಣೆ ಎಂಬ ಸಂದೇಶ ರವಾನೆ ಮಾಡುವುದು ನ್ಯಾಯಾಲಯದ ಮುಖ್ಯ ಉದ್ದೇಶವಾಗಿದೆ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಹಾಗೂ ರಾಜ್ಯ ನ್ಯಾಯಾಂಗ ಅಕಾಡೆಮಿಯ ಗವರ್ನರ್ ಕೆ.ಎನ್.ಫಣೀಂದ್ರ ತಿಳಿಸಿದರು.

ರವಿವಾರ ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ನ್ಯಾಯಾಂಗ ಅಕಾಡೆಮಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು, ಪೊಲೀಸ್ ಹಾಗೂ ಅಭಿಯೋಜಕ ಇಲಾಖೆಗಳ ಸಹಯೋಗದಲ್ಲಿ ವಿದ್ಯುನ್ಮಾನ ಸಾಕ್ಷಿ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಮಾನಗಳಲ್ಲಿ ಈ ಉಪಕರಣಗಳ ಬಳಕೆ ಹೆಚ್ಚಾಗುತ್ತಿದ್ದು ಇವುಗಳ ದುರುಪಯೋಗವೂ ಹೆಚ್ಚಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ವಿದ್ಯುನ್ಮಾನ ಸಾಕ್ಷಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತದೆ. ಯಾವುದೇ ಒಂದು ಪ್ರಕರಣದ ತನಿಖೆಯಲ್ಲಿ ತನಿಖಾಧಿಕಾರಿಗಳ ಪಾತ್ರ ಮಹತ್ವದಾಗಿದ್ದು, ಪ್ರಕರಣದ ಸಾಕ್ಷ ಸಂಗ್ರಹದಲ್ಲಿ ತನಿಖಾಧಿಕಾರಿ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ನ್ಯಾಯಾಲಯದಲ್ಲಿ ನೈತಿಕತೆ ಆಧಾರದ ಮೇಲೆ ಪ್ರಕರಣ ಇತ್ಯರ್ಥಗಳಾಗಬೇಕು. ಇಂದಿನ ದಿನಮಾನಗಳಲ್ಲಿ ಸಾಕ್ಷಗಳ ಡಿಜಿಟಲೀಕರಣ ಮಾಡುವುದು ಅತೀ ಅವಶ್ಯಕವಾಗಿದ್ದು, ನ್ಯಾಯಾಲಯಗಳಿಗೆ ವಿದ್ಯುನ್ಮಾನ ಸಾಕ್ಷಗಳನ್ನು ಒದಗಿಸುವಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕಿದ್ದು ಈ ಉಪಕರಣಗಳ ಬಳಕೆ ಬಗ್ಗೆ ಪ್ರತಿಯೊಬ್ಬರು ಜ್ಞಾನ ಹೊಂದುವದು ಅತೀ ಅವಶ್ಯಕವಾಗಿದೆ ಎಂದು ಫಣೀಂದ್ರ ತಿಳಿಸಿದರು.

ಯಾವುದೇ ಪ್ರಕರಣದಲ್ಲಿ ತನಿಖಾಧಿಕಾರಿ, ನ್ಯಾಯವಾದಿ ಹಾಗೂ ನ್ಯಾಯಾಧೀಶರ ಪರಸ್ಪರ ಸಮನ್ವಯತೆ ಅತೀ ಅವಶ್ಯಕ. ಇದರಿಂದ ಅಪರಾಧಿಗೆ ಶಿಕ್ಷೆ ನೀಡಲು ಸಹಕಾರಿಯಾಗುತ್ತದೆ. ಇಂದು ನಡೆಯುತ್ತಿರುವ ವಿದ್ಯುನ್ಮಾನ ಸಾಕ್ಷ ಕಾರ್ಯಾಗಾರ ದಲ್ಲಿ ಚರ್ಚಿಸಲಾಗುವ ವಿಷಯಗಳನ್ನು ಅರಿತು ಚಿಂತನ ಮಂಥನ ಮಾಡಿ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿಭಾಯಿಸಿ ಇತರರಿಗೂ ಈ ಕುರಿತು ಮಾಹಿತಿ ನೀಡುವಂತೆ ಅವರು ಹೇಳಿದರು.

ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯರೂರ್ ಮಾತನಾಡಿ, ಆಧುನಿಕತೆಯ ದಿನಮಾನಗಳಲ್ಲಿ ವಿದ್ಯುನ್ಮಾನ ಸಾಕ್ಷಗಳ ಪ್ರಾಮುಖ್ಯತೆಯು ಹೆಚ್ಚಾಗುತ್ತಿದೆ. ಇಂತಹ ಸಾಕ್ಷಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವ ಕಾರ್ಯವು ಅತ್ಯಂತ ಪ್ರಮುಖವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮಾತನಾಡಿ, ಯಾವುದೇ ಪ್ರಕರಣದಲ್ಲಿ ವಿದ್ಯುನ್ಮಾನ ಸಾಕ್ಷದ ಬಗ್ಗೆ ನ್ಯಾಯಾಧೀಶರ ಜೊತೆಗೆ ಪೊಲೀಸ್, ಅಭಿಯೋಜನೆ ಹಾಗೂ ನ್ಯಾಯಾಲಯಗಳ ಸಿಬ್ಬಂದಿಗಳ ಪಾತ್ರವು ಮಹತ್ವದಾಗಿದೆ. ಸಾಕ್ಷ ಸಂಗ್ರಹದಲ್ಲಿ ಪೊಲೀಸ್ ಇಲಾಖೆ ಮುತುವರ್ಜಿ ವಹಿಸುವುದು ಅತೀ ಅವಶ್ಯಕವಾಗಿದೆ ಎಂದರು.

ವಿದ್ಯುನ್ಮಾನ ಸಾಕ್ಷಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅದರ ನೈಜತೆಯನ್ನು ಗುರುತಿಸುವ ಮಹತ್ತರ ಕಾರ್ಯವಾಗಬೇಕಿದೆ. ಸಂವಿಧಾನದ ಹಕ್ಕಿಗೆ ಚ್ಯುತಿ ಬಂದಂತಹ ಸಂದರ್ಭದಲ್ಲಿ ಎಲ್ಲರೂ ಕೈ ಜೋಡಿಸಿ ದುಷ್ಟರಿಗೆ ಶಿಕ್ಷೆ ನೀಡಿ ಸಂವಿಧಾನದ ಆಶೋತ್ತರ ನೆರವೇರಿಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಗಾರದಲ್ಲಿ ಹೈಕೋರ್ಟ್‌ನ ನ್ಯಾಯವಾದಿ ಸಂದೇಶ್ ಜೆ.ಚೌಟಾ, ವಿದ್ಯುನ್ಮಾನ ಸಾಕ್ಷಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಿಕೆ, ಗುರುತಿಸುವಿಕೆ ಇವುಗಳ ಕುರಿತು, ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಮನಿಷ್ ಕುಮಾರ್-ಅಂತರ್ಜಾಲ ಅಪರಾಧ ಹಾಗೂ ಡಿಜಿಟಲ್ ಫೋರೆನ್ಸಿಕ್ ಕುರಿತು ಮತ್ತು ಸಿ.ಐ.ಡಿಯ ಕಾನೂನು ಸಲಹೆಗಾರ ಮಹೇಶ್ ವೈದ್ಯ- ವಿದ್ಯುನ್ಮಾನ ಸಾಕ್ಷ ಸಂಗ್ರಹಣೆ ಹಾಗೂ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News