ಸಿ.ಟಿ.ರವಿ ದತ್ತಮಾಲೆ ಹಾಕಿದ್ದು ಕ್ಯಾಸಿನೋ ಆಟಕ್ಕ ?: ಸಿ.ಎಂ.ಇಬ್ರಾಹಿಂ ಕಿಡಿ
ಬಳ್ಳಾರಿ, ಫೆ.23: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ದತ್ತಾತ್ರೇಯ ಮಾಲೆ ಹಾಕಿದ್ದು, ಕ್ಯಾಸಿನೋ ಆಟಕ್ಕ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಖಾರವಾಗಿ ಪ್ರಶ್ನಿಸಿದ್ದಾರೆ.
ರವಿವಾರ ಸಂಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈ ಶ್ರೀರಾಮ್ ಎಂದು ಮಾಲೆ ಹಾಕುವವರು ಇವರು, ದತ್ತಾತ್ರೇಯ ಮಾಲೆ ಹಾಕಿ ಕ್ಯಾಸಿನೋ ಮಾಡಲು ಸಂಕಲ್ಪ ಮಾಡಿದ್ದಾರೆಯೇ? ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ಅಬಕಾರಿ ಸಚಿವ ಎಚ್.ನಾಗೇಶ್ ಮನೆ-ಮನೆಗೆ ಹೆಂಡ ಸರಬರಾಜು ಮಾಡುತ್ತೇವೆ ಎನ್ನುತ್ತಾರೆ ಎಂದ ಅವರು, ಧರ್ಮ, ಭಾಷೆ ಹೆಸರಿನಲ್ಲಿ ಮತ ಕೇಳುವವರು ಹೇಡಿಗಳು. ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕೇಂದ್ರ ಸರಕಾರ ಹಣ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಗಂಡಾಂತರ: ಮೊಘಲರು, ಬ್ರಿಟಿಷರು ಹಾಗೂ ಕಾಂಗ್ರೆಸ್ ಸರಕಾರ ಈ ದೇಶದಲ್ಲಿ ಆಳ್ವಿಕೆ ನಡೆಸಿದಾಗ ಹಿಂದೂಧರ್ಮಕ್ಕೆ ಯಾವುದೇ ಗಂಡಾಂತರ ಇರಲಿಲ್ಲ. ಆದರೀಗ ಪ್ರಧಾನಿ ಮೋದಿ ಸರಕಾರದ ಆಳ್ವಿಕೆಯಲ್ಲಿ ಏಕೆ ಹಿಂದೂ ಧರ್ಮಕ್ಕೆ ಗಂಡಾಂತರ ಬಂದಿದೆ ಎಂದರು.