ಎಸ್‍ಡಿಪಿಐ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಖಲೀಲುಲ್ಲಾ ನೇಮಕ

Update: 2020-02-23 18:13 GMT

ಚಾಮರಾಜನಗರ, ಫೆ.23: ವೈಯಕ್ತಿಕ ಕಾರಣಗಳಿಂದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಸೈಯದ್ ಆರೀಫ್ ರವರು ತಮ್ಮ ಹುದ್ದೆಯ ಜವಾಬ್ದಾರಿಯಿಂದ ತೆರವುಗೊಳಿಸಿ ಕೊಡಬೇಕೆಂದು ನೀಡಿದ ಮನವಿಗೆ ಸ್ಪಂದಿಸಿದ ರಾಜ್ಯ ಕಾರ್ಯದರ್ಶಿ ಮಂಡಳಿ ಅವರನ್ನು ಜಿಲ್ಲಾಧ್ಯಕ್ಷ ಹುದ್ದೆಯಿಂದ ಬಿಡುಗಡೆಗೊಳಿಸಿದೆ. ತೆರವಾದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಖಲೀಲುಲ್ಲಾ ಅವರನ್ನು ನೇಮಿಸಲಾಗಿದೆ. 

ರವಿವಾರ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆ ಕರೆದಿದ್ದು, ಅಲ್ಲಿ ನಡೆದ ಆಂತರಿಕ ಚುನಾವಣೆಯ ಮೂಲಕ ಚಾಮರಾಜನಗರ ಪಟ್ಟಣದ ವಾರ್ಡ್ ಸಂಖ್ಯೆ-4 ನಗರಸಭಾ ಸದಸ್ಯರಾದ ಖಲೀಲುಲ್ಲಾ ರವರನ್ನು ಮುಂಬರುವ ಒಂದೂವರೆ ವರ್ಷದ ಅವಧಿಗೆ ನೂತನವಾಗಿ ಎಸ್‍ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. 

ಚುನಾವಣಾ ಪ್ರಕ್ರಿಯೆಯು ಎಸ್‍ಡಿಪಿಐ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ರವರ ಮೇಲುಸ್ತುವಾರಿಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಖಲೀಲುಲ್ಲಾ ರವರು ಮಾತನಾಡಿ, ನನ್ನ ಹೆಗಲಿಗೆ ದೊಡ್ಡ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಈ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಸಹಕಾರದ ಅವಶ್ಯಕತೆ ಇದೆ. ಪರ್ಯಾಯ ರಾಜಕೀಯಕ್ಕೆ ದಿಕ್ಸೂಚಿ ನಮ್ಮ ಜಿಲ್ಲೆಯಿಂದಲೇ ಸಿಗಲಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಆಹಮದ್, ನಗರಸಭಾ ಸದಸ್ಯರು ಹಾಗೂ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಮೀಉಲ್ಲಾ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್. ಎಂ, ಜಿಲ್ಲಾ ಕಾರ್ಯದರ್ಶಿ ಜಬೀ ನೂರ್, ನಗರಸಭಾ ಸದಸ್ಯ ಮುಹಮ್ಮದ್ ಅಮೀಕ್, ಎಸ್‍ಡಿಪಿಐ ಜಿಲ್ಲಾ ನಾಯಕರು ಹಾಗೂ ವಾರ್ಡ್ ಅಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News