ಶಿಕ್ಷಕರು, ಉಪನ್ಯಾಸಕರ ವೇತನ ಸಕಾಲದಲ್ಲಿ ಪಾವತಿಸಲು ಒತ್ತಾಯ

Update: 2020-02-24 12:49 GMT

ಬೆಂಗಳೂರು, ಫೆ. 24: ರಾಜ್ಯ ಸರಕಾರ ಖಜಾನೆ-2ರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಪ್ರತಿವರ್ಷ ಸಕಾಲದಲ್ಲಿ ಶಿಕ್ಷಕರ, ಉಪನ್ಯಾಸಕರ ಹಾಗೂ ಅಧ್ಯಾಪಕರ ವೇತನ ಪಾವತಿ ಆಗಲು ವ್ಯವಸ್ಥೆ ಮಾಡಬೇಕೆಂದು ಜೆಡಿಎಸ್ ಮುಖಂಡ ರಮೇಶ್ ಬಾಬು ಆಗ್ರಹಿಸಿದ್ದಾರೆ.

ಆದ್ಯತೆ ಮೇಲೆ ಇದನ್ನು ಪರಿಗಣಿಸಿ ಒಂದೆರೆಡು ದಿನಗಳಲ್ಲಿ ವೇತನ ಪಾವತಿ ಮಾಡಬೇಕು. ಈಗ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು ನಿಧಾನವಾದಲ್ಲಿ ಇದು ಪರೀಕ್ಷಾ ಕ್ರಮ ಹಾಗೂ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುತ್ತದೆ. ಸರಕಾರ ಈ ಸಮಸ್ಯೆ ಕೂಡಲೇ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತಿ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ನಿಗದಿತ ಹಣ ಹಂಚಿಕೆ/ಬಿಡುಗಡೆ ಮಾಡದೆ, ಸರಕಾರಿ ಮತ್ತು ಅರೆ ಸರಕಾರಿ ನೌಕರರ ವೇತನ ಸಕಾಲದಲ್ಲಿ ಬಿಡುಗಡೆ ಆಗುತ್ತಿಲ್ಲ. ಬಜೆಟ್ ಅನುಮೋದನೆ ಮತ್ತು ಹಂಚಿಕೆ ಮೂಲಕ ಹಣವನ್ನು ಪ್ರತಿ ಇಲಾಖೆಗೆ ನೀಡಲಾಗುತ್ತದೆ. ಆದರೆ ಇಲಾಖಾ ಮಟ್ಟದಲ್ಲಿ ಓ2 ಮುಖಾಂತರ ಹೊಂದಾಣಿಕೆ ಮಾಡಿಕೊಂಡು ವೇತನ ಪಾವತಿ ಮಾಡಬೇಕು. ಖಜಾನೆ-2 ಕಾರಣಕ್ಕಾಗಿ ಶಿಕ್ಷಕರ, ಉಪನ್ಯಾಸಕರ, ಅಧ್ಯಾಪಕರ ವೇತನ ವಿಳಂಬವಾಗಿದೆ. ಪ್ರತಿವರ್ಷ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಕೆಲವು ಸಲ ಮಾರ್ಚ್ ನಂತರ ಬಾಕಿ ವೇತನ ಪಾವತಿ ಮಾಡುತ್ತಾರೆ. ಇದರಿಂದಾಗಿ ನೌಕರರು, ಶಿಕ್ಷಕರು ವಿನಾಕಾರಣ ತೊಂದರೆಗೆ ಒಳಗಾಗುತ್ತಾರೆ.

ಪದವಿ ಕಾಲೇಜುಗಳ ಅಧ್ಯಾಪಕರು ಜನವರಿ ತಿಂಗಳ ವೇತನ ಇನ್ನೂ ಪಡೆದಿಲ್ಲ. ಉನ್ನತ ಶಿಕ್ಷಣ ಸಚಿವರು ಕೂಡಲೇ ಇತ್ತ ಗಮನ ಹರಿಸಿ ಆರ್ಥಿಕ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆ ಪ್ರತಿವರ್ಷ ಮರುಕಳಿಸದಂತೆ ಮತ್ತು ಅಧ್ಯಾಪಕರು ಶಿಕ್ಷಣ ಚಟುವಟಿಕೆ ಬಿಟ್ಟು ವೇತನಕ್ಕಾಗಿ ಅಲೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News