ತುಮಕೂರಿನಲ್ಲಿ ರೌಡಿಗಳ ಅಟ್ಟಹಾಸ: ಹಾಡಹಗಲೇ ಮಚ್ಚು ಹಿಡಿದು ಓಡಾಟ, ನಾಲ್ವರ ಮೇಲೆ ಹಲ್ಲೆ

Update: 2020-02-24 14:09 GMT

ತುಮಕೂರು, ಫೆ.24: ಮಚ್ಚು ಹಿಡಿದು ಓಡಾಡಿಕೊಂಡು ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿರುವ ಘಟನೆ ತುಮಕೂರು ನಗರದ ಊರುಕೆರೆ ಗ್ರಾಮದಲ್ಲಿ ಇಂದು ನಡೆದಿದೆ.

ಊರುಕೆರೆಯಲ್ಲಿ ರೌಡಿ ಶೀಟರ್ ಕೃಷ್ಣಪ್ಪ ಅವರು ಕಾರು ಹಿಂದಕ್ಕೆ ತೆಗೆಯುವಾಗ ರಾಜಣ್ಣ ಎಂಬವರಿಗೆ ತಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ರೌಡಿ ಶೀಟರ್ ಕೃಷ್ಣಪ್ಪ ಮತ್ತು ಆತನ ಹಿಂಬಾಲಕರು ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿಕೊಂಡು ರಾಜಣ್ಣನವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ರಾಜಣ್ಣನವರ ಜೊತೆಯಲ್ಲಿದ್ದ ರಂಗಣ್ಣ, ಪುಟ್ಟನರಸಮ್ಮ ಮತ್ತು ಸುನೀಲ್ ಎಂಬುವವರಿಗೂ ಮಚ್ಚಿನಿಂದ ಎದೆ ಮತ್ತು ಹೊಟ್ಟೆಗೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಇವರನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ರೌಡಿ ಪಟ್ಟಿಯಲ್ಲಿರುವ ಜಗದೀಶ, ಮಂಜುನಾಥ, ಕೃಷ್ಣಪ್ಪ, ಪುರೊಷತ್ತಮ್ ಮತ್ತು ಅವರ ಹಿಂಬಾಲಕರಾದ ಅಕ್ಷಯ್ ಹಾಗೂ ರಘು ಹಲ್ಲೆ ಆರೋಪಿಗಳಾಗಿದ್ದು, ತಲವಾರುಗಳನ್ನು ಹಿಡಿದು ಗ್ರಾಮದ ತುಂಬೆಲ್ಲಾ ಓಡಾಡಿಕೊಂಡು ಹಲ್ಲೆ ನಡೆಸಿದ್ದನ್ನು ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News