ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ ಲಾರಿಗೆ ಢಿಕ್ಕಿ; ಸವಾರರಿಬ್ಬರು ಮೃತ್ಯು

Update: 2020-02-24 15:53 GMT

ತರೀಕೆರೆ, ಫೆ.24: ದಂಡದ ಭಯದಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಚಾಲನೆ ಮಾಡಿದ ಪರಿಣಾಮ ಬೈಕೊಂದು ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮದ್ಯಾಹ್ನ ನಡೆದಿದೆ.

ಮೃತರನ್ನು ಕುಮಾರ್ (30) ಮತ್ತು ಮೋಹನ್ (30) ಎಂದು ಗುರುತಿಸಲಾಗಿದೆ. ಇವರು ಬೈಕ್ ನಲ್ಲಿ ಶಿವಮೊಗ್ಗದಿಂದ ಲಕ್ಕವಳ್ಳಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಲಕ್ಕವಳ್ಳಿ ಡ್ಯಾಂ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಇಬ್ಬರು ಯುವಕರಿದ್ದ ಮೋಟಾರ್ ಬೈಕೊಂದು ವೇಗವಾಗಿ ಬಂದಿದೆ. ಈ ವೇಳೆ ಪೊಲೀಸರು ಅಡ್ಡಹಾಕಿದರೂ ತಪ್ಪಿಸಿಕೊಂಡ ಅವರು ವೇಗವಾಗಿ ಮುಂದೆ ಸಾಗಿದ್ದಾರೆ. ಇದೇ ಸಂದರ್ಭ ಇವರ ಬೈಕ್, ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಅವರು ರಸ್ತೆಗೆ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೊಲೀಸರು ಮಹಜರು ನಡೆಸುತ್ತಿದ್ದು, ಬೈಕ್ ಮಾಲಕರ ವಿವರ ಸಂಗ್ರಹಕ್ಕೆ ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News