ಟ್ರಂಪ್ ಗೆ ಮೋದಿ ಕೃತಕ ಹಿಂದೂಸ್ತಾನ ತೋರಿಸುತ್ತಿದ್ದಾರೆ: ಯಶವಂತ ಸಿನ್ಹಾ

Update: 2020-02-24 16:06 GMT

ವಿಜಯಪುರ, ಫೆ.24: ಎನ್‌ಆರ್‌ಸಿ, ಎನ್‍ಪಿಆರ್ ಕಾಯ್ದೆ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನು ಧೂಳಿಪಟ ಮಾಡಿದೆ. ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಘೋಷಣೆಯನ್ನು ಪಾರ್ಲಿಮೆಂಟ್‍ನಲ್ಲಿ ಮಾಡುವವರೆಗೂ ಹೋರಾಟ ನಿಲ್ಲಬಾರದು. ಸಂಘಟಿತ ಆಂದೋಲನದ ಮೂಲಕ ಕೇಂದ್ರ ಸರ್ಕಾರ ಈ ಕಾಯ್ದೆ ಹಿಂದಕ್ಕೆ ಪಡೆಯುವ ಅನಿವಾರ್ಯತೆ ಸೃಷ್ಟಿ ಮಾಡಬೇಕು ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಯಶವಂತ ಸಿನ್ಹಾ ಕರೆ ನೀಡಿದರು. 

ವಿಜಯಪುರದ ಕೊಲ್ಹಾರ ರಸ್ತೆ ಜುಮನಾಳ ಕ್ರಾಸ್ ಬಳಿ ಬಿಜಾಪುರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸೋಮವಾರ ನಡೆದ 'ಸಂವಿಧಾನ ಉಳಿಸಿ' ಆಂದೋಲನ ಉದ್ದೇಶಿಸಿ ಮಾತನಾಡಿದ ಅವರು, ನಾನು ನ್ಯಾಯವಾದಿ ಅಲ್ಲದಿದ್ದರೂ ಕಾಯ್ದೆಯ ಬಗ್ಗೆ ಅರಿವಿದೆ, ಸಿಎಎ, ಎನ್‌ಆರ್‌ಸಿ ಕಾಯ್ದೆಯನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ. ಎನ್‍ಪಿಆರ್, ಎನ್‌ಆರ್‌ಸಿ ಹಾಗೂ ಸಿಎಎ ಒಂದಕ್ಕೊಂದು ಅವಿನಾಭವ ಸಂಬಂಧ ಹೊಂದಿವೆ. ಇದನ್ನು ಪ್ರತ್ಯೇಕಿಸಿ ವಿಶ್ಲೇಷಿಸುವುದು ದೊಡ್ಡ ತಪ್ಪು. ದೇಶದಲ್ಲಿ ಅರ್ಥವ್ಯವಸ್ಥೆ ಸಂಪೂರ್ಣ ಕುಸಿತ ಕಂಡಿದೆ. ರೈತ, ಯುವಕರು, ಕಾರ್ಮಿಕರು, ಮಹಿಳೆಯರು ಹೀಗೆ ಎಲ್ಲರೂ ತೊಂದರೆ ಎದುರಿಸುತ್ತಿದ್ದಾರೆ. ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿಯುತ್ತಿದೆ. ಇದರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೀತಿಯ ಕಾಯ್ದೆ ಜಾರಿಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾರ್ಲಿಮೆಂಟ್‍ನಲ್ಲಿ ಎನ್‍ಪಿಆರ್, ಎನ್‌ಆರ್‌ಸಿ, ಸಿಎಎ ರದ್ದುಗೊಳಿಸುವ ಘೋಷಣೆ ಮಾಡುವವರೆಗೂ ಹೋರಾಟ ಶಕ್ತಿಯುತವಾಗಿ ನಡೆಯಬೇಕು. ನಾವು ಹೋರಾಟವನ್ನೂ ಮಾಡುತ್ತೇವೆ, ಇಲ್ಲಿ ಗೆಲುವನ್ನೂ ಸಾಧಿಸುತ್ತೇವೆ ಎಂಬ ಸಂಕಲ್ಪ ತೊಡಬೇಕು. ಅಧಿಕಾರದಲ್ಲಿರುವವರು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಬೇಕು. 2024ರವರೆಗೆ ಕಾಯಬೇಕಿಲ್ಲ. ಗಾಂಧೀಜಿ ಅವರ ಅಹಿಂಸೆ, ಶಾಂತಿ ತತ್ವಗಳಿಂದ ಸ್ವಾತಂತ್ರ್ಯ ಪಡೆಯುವಂತೆ, ಕೇಂದ್ರ ಸರ್ಕಾರವನ್ನು ಶಿರಬಾಗುವಂತೆ ಮಾಡಬೇಕು ಎಂದರು. 

ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಆದರೆ ಅವರಿಗೆ ಕೃತಕವಾದ ಹಿಂದೂಸ್ತಾನ ತೋರಿಸಲಾಗುತ್ತಿದೆ. ನೈಜ ಹಿಂದೂಸ್ತಾನ ನೋಡಲು ಟ್ರಂಪ್ ವಿಜಯಪುರಕ್ಕೆ ಬರಬೇಕಾಗುತ್ತಿತ್ತು. ಅವರು 'ದೋಸ್ತ್' ಎಂದು ಕರೆಯುವ ವ್ಯಕ್ತಿ ಯಾವ ರೀತಿ ಜನರ ನಿದ್ದೆಗೆಡೆಸಿದ್ದಾರೆ ಎಂಬುದು ಅರ್ಥವಾಗುತ್ತಿತ್ತು ಎಂದು ಲೇವಡಿ ಮಾಡಿದರು.

ಮಾಜಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಸಮುದಾಯದ ರಾಷ್ಟ್ರಪ್ರೇಮವನ್ನು ಪ್ರಶ್ನಿಸುವುದು ಬೇಜವಾಬ್ದಾರಿ ಸಂಗತಿ. ಬೆವರು ಸುರಿಸಿ ದುಡಿಯುವವನೇ ನಿಜವಾದ ರಾಷ್ಟ್ರಭಕ್ತ. ಬ್ಯಾಂಕುಗಳ ಕೋಟ್ಯಂತರ ರೂ. ಹಣವನ್ನು ನುಂಗಿರುವ ನಿಮ್ಮ ಹಿತೈಷಿಗಳು ರಾಷ್ಟ್ರಭಕ್ತರೇ? ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದರು.  

ಮಾಜಿ ಸಭಾಪತಿ ರಮೇಶ್ ಕುಮಾರ್ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರನ್ನು ಕೊಂದವರೇ ಇಂದು ದೇಶವನ್ನು ಆಳುತ್ತಾರೆ. ಇವರು  ಗಾಂಧೀಜಿಯನ್ನು ಕೊಂದಿರಬಹುದು. ಗಾಂಧೀವಾದ ಕೊಲ್ಲಲು ಸಾಧ್ಯವಿಲ್ಲ. ಬದುಕು ಸವೆದು ಹೋದರೂ ಚಿಂತೆಯಿಲ್ಲ. ಈ ಹೋರಾಟದಲ್ಲಿ ಭಾಗಿಯಾಗುವ ಸಂತೃಪ್ತಿ ನನಗಿದೆ, ನೀವು ಹೆದರಬೇಕಾಗಿಲ್ಲ ಎಂದರು. 

ಮುಖ್ಯ ಅತಿಥಿಯಾಗಿದ್ದ ಹೊಸದಿಲ್ಲಿಯ ಮೌಲಾನಾ ಮೆಹಮೂದ್ ಮದನಿ ಮಾತನಾಡಿ, ಜನರನ್ನು ಒಡೆದಾಳುವ ಸರ್ಕಾರದ ಉದ್ದೇಶ ಎಂದೂ ಸಫಲವಾಗುವುದಿಲ್ಲ. ಸಂವಿಧಾನದ ಜೊತೆ ಆಟವಾಡುತ್ತಿರುವ ಕೇಂದ್ರ ಸರ್ಕಾರ ಒಂದು ರೀತಿಯ ಅನೈತಿಕ ಸರ್ಕಾರ ಎಂದರೂ ತಪ್ಪಾಗಲಾರದು. ಪ್ರಜಾತಾಂತ್ರಿಕ ವ್ಯವಸ್ಥೆಯಿಂದ ಈ ಸರ್ಕಾರ ಆಯ್ಕೆಯಾಗಿದ್ದರೂ ಸಹ ಸಂವಿಧಾನ ಆಶಯಗಳೊಂದಿಗೆ ಆಟವಾಡುವ ಮೂಲಕ ಈ ಸರ್ಕಾರ ಅನೈತಿಕತೆಯ ಎಲ್ಲೆಯನ್ನು ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಪಿಐ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ, ಮಾಜಿ ಸಚಿವ ಎಂ.ಬಿ. ಪಾಟೀಲ್, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಪ್ರೊ.ಸುಷ್ಮಾ ಅಂದಾರೆ, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಶಾಸಕರಾದ ಯು.ಟಿ. ಖಾದರ್, ಯಶವಂತರಾಯಗೌಡ ಪಾಟೀಲ, ಮಾಜಿ ಸಚಿವ ಶಿವಾನಂದ ಪಾಟೀಲ, ಎಂಎಲ್‍ಸಿ ಪ್ರಕಾಶ್ ರಾಠೋಡ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಎಸ್.ಜಿ. ನಂಜಯ್ಯನಮಠ, ಸುಪ್ರೀಂಕೋರ್ಟ್ ನ್ಯಾಯವಾದಿ ಭಾನುಪ್ರಕಾಶ, ಅಹ್ಲೆ ಸುನ್ನತ್ ಜಮಾತ್ ರಾಜ್ಯಾಧ್ಯಕ್ಷ ಸೈಯ್ಯದ್ ತನ್ವೀರ್ ಪೀರ್ ಹಾಶ್ಮೀ, ಮುಖಂಡರಾದ ಅಬ್ದುಲ್‍ ಹಮೀದ್ ಮುಶ್ರೀಫ್, ಮುಹಹ್ಮದ್‍ ರಫೀಕ್ ಟಪಾಲ್, ಅಬ್ದುಲ್‍ ರಜಾಕ್ ಹೊರ್ತಿ ಪಾಲ್ಗೊಂಡಿದ್ದರು.

ಸಮಾವೇಶಗೊಂಡ ಲಕ್ಷಾಂತರ ಜನ 
ಜುಮನಾಳ ಕ್ರಾಸ್ ಬಳಿ ನಡೆದ ಸಂವಿಧಾನ ಉಳಿಸಿ ಆಂದೋಲನದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ ಎನ್‌ಆರ್‌ಸಿ, ಸಿಎಎ, ಎನ್‍ಪಿಆರ್ ವಿರೋಧಿಸಿ ಒಕ್ಕೊರೆಲಿನ ಘೋಷಣೆ ಕೂಗಿದರು. ಸಾವಿರಾರು ಯುವಕರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಆಂದೋಲನದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News