ಪಾತಕಿ ರವಿ ಪೂಜಾರಿ ಬಂಧನ
Update: 2020-02-24 18:26 GMT
ಕೊಲೆ, ಬೆದರಿಕೆ ಸೇರಿದಂತೆ ಗಂಭೀರ ಅಪರಾಧ ಆರೋಪ ಪ್ರಕರಣ ಸಂಬಂಧ ಆಫ್ರಿಕದ ಸೆನೆಗಲ್ನಲ್ಲಿ ಬಂಧಿಸಲಾದ ಪಾತಕಿ ರವಿ ಪ್ರಕಾಶ್ ಪೂಜಾರಿ(59)ಯನ್ನು ರವಿವಾರ ರಾತ್ರಿಯೇ ಬೆಂಗಳೂರಿಗೆ ಕರೆತಂದಿದ್ದು, ತಿಲಕ್ ನಗರ ಕೊಲೆ ಪ್ರಕರಣದಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು ಮಾ.7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಈ ಕುರಿತು ಸೋಮವಾರ ನಗರ ನೃಪತುಂಗ ರಸ್ತೆಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾತಕಿ ರವಿ ಪ್ರಕಾಶ್ ಪೂಜಾರಿಯನ್ನು ಪಶ್ಚಿಮ ಆಫ್ರಿಕದ ಸೆನೆಗಲ್ನಿಂದ ಬೆಂಗಳೂರಿಗೆ ಕರೆತರಲಾಗಿದ್ದು, ಬೆಂಗಳೂರು ನಗರ ಪೊಲೀಸರು ತನಿಖೆಗಾಗಿ ವಿಶೇಷ ತಂಡವನ್ನೇ ರಚನೆ ಮಾಡಿದ್ದಾರೆ.