ಶಾಸಕ ಯತ್ನಾಳ್ ಬಂಧನಕ್ಕೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಧರಣಿ

Update: 2020-02-27 12:13 GMT

ಚಿಕ್ಕಮಗಳೂರು, ಫೆ.27: ಮಹಾತ್ಮ ಗಾಂಧೀಜಿಯವರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಗಾಂಧೀಜಿಯರ ಜೊತೆಗೂಡಿ ಅನೇಕರು ಅವರೊಂದಿಗೆ ಹೋರಾಟ ಮಾಡಿದ್ದಾರೆ. ಅಂತವರ ಪೈಕಿ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಎಚ್.ಎಸ್.ದೊರೆಸ್ವಾಮಿ ಅವರೂ ಒಬ್ಬರಾಗಿದ್ದಾರೆ. ಇಂತಹ ಮಹಾನ್ ಹೋರಾಟಗಾರ ದೊರೆಸ್ವಾಮಿ ಅವರನ್ನು ಬಿಜೆಪಿಯ ಕೆಲ ಸಂಸದರು, ಶಾಸಕರು ಅವಹೇಳನ ಮಾಡುವ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುವಂತ್ ಹೇಳಿದರು.

ಗುರುವಾರ ನಗರದ ಗಾಂಧಿ ಪ್ರತಿಮೆ ಎದುರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಶಾಸಕ ಬಸವನಗೌಡ ಯತ್ನಾಳ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇದು ಸಂವಿಧಾನಕ್ಕೆ, ಭಾರತಮಾತೆಗೆ ಮಾಡುತ್ತಿರುವ ಅಪಚಾರವಾಗಿದ್ದು, ದೊರೆಸ್ವಾಮಿ ವಿರುದ್ಧ ಮಾತಾಡಿರುವ ಯತ್ನಾಳ್ ಅವರನ್ನು ಕೂಡಲೇ ಬಂಧಿಸಬೇಕು. ಅವರ ಶಾಸಕ ಸ್ಥಾನ ವಜಾ ಮಾಡಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಬಿಜೆಪಿ ಕೆಲ ಮುಖಂಡರು ಇತ್ತೀಚೆಗೆ ಏನೇನೋ ಮಾತನಾಡುತ್ತಿದ್ದು ಅವರು ಬುದ್ಧಿ ಭ್ರಮಣೆಯಾದಂತೆ ಕಾಣುತ್ತಿದೆ. ಅಂತವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಅಗತ್ಯವಿದೆ ಎಂದ ಅವರು,  ಸಂವಿಧಾನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ನಿರಂತರವಾಗಿ  ದಾಳಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಧರಣಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ರಾಜ್ಯ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ, ವಕ್ತಾರ ಶಿವಾನಂದಸ್ವಾಮಿ ಮುಖಂಡರಾದ  ಪವನ್, ರೂಬಿನ್‍ಮೊಸೆಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News