ಎಚ್.ಡಿ ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಬಿ.ಸಿ ಪಾಟೀಲ್
ಶಿವಮೊಗ್ಗ: ರೈತರ ಸಾಲ ಮನ್ನಾ ಇಲ್ಲ ಎಂದ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಟ್ವೀಟ್ ಗೆ ತಿರುಗೇಟು ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ, ವದಂತಿ ಹಬ್ಬಿಸುವುದರಲ್ಲಿ ನಿಸ್ಸೀಮರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಸುಳ್ಳು ಹೇಳುವುದರಲ್ಲಿ ನಂ.1 ಅವರು. ಕುಮಾರಸ್ವಾಮಿ ಮಾತಿಗೆ ಅಷ್ಟೊಂದು ಬೆಲೆ ಕೊಟ್ಟರೆ ಅವರ ರೀತಿ-ನೀತಿ, ನಡವಳಿಕೆನೇ ಬೇರೆ ಇರುತ್ತದೆ ಎಂದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ಘೋಷಣೆ ಮಾಡಿದ ಯೋಜನೆಗಳು ಎಷ್ಟು ಜನರಿಗೆ ತಲುಪಿದೆ. ಅವರು ಶಾಸನ ಸಭೆಯಲ್ಲಿ ಏನು ಮಾತನಾಡಿದರು, ಏನು ಉತ್ತರ ಕೊಟ್ಟರು ಎಂಬುದು ಬಹುಶಃ ಯಾರಿಗೂ ಅರ್ಥ ಆಗಲಿಲ್ಲ, ನನಗೂ ಕೂಡ ಅರ್ಥ ಆಗಲಿಲ್ಲ ಎಂದು ವ್ಯಂಗ್ಯವಾಡಿದರು.
ಅವರ 14 ತಿಂಗಳ ಅಧಿಕಾರಾವಧಿಯಲ್ಲಿ ಎಷ್ಟು ರೈತರ ಸಾಲ ಮನ್ನಾ ಮಾಡಿದರು. ಯಾವ ರೈತನಿಗೆ ಅದರ ಫಲ ದೊರಕಿತು. ಸಿಎಂ ಯಡಿಯೂರಪ್ಪ ಯಾವ ರೈತನಿಗೂ ಅನ್ಯಾಯ ಆಗಲು ಬಿಡಲ್ಲ ಎಂದು ಹೇಳಿದ್ದಾರೆ. ರೈತರ ತೊಂದರೆ ಇದ್ದರೆ ಅದರ ಸರಿಪಡಿಸುತ್ತೇವೆ ಎಂದು ಮಾಹಿತಿ ನೀಡಿದರು.