ಚಾಮರಾಜನಗರ : ರಸ್ತೆ ಸುರಕ್ಷತೆಯ ಜಾಗೃತಿಗಾಗಿ ಕೆ.ಎಸ್.ಆರ್.ಟಿ.ಸಿ ಯಿಂದ ನಾಟಕ ಪ್ರದರ್ಶನ
ಚಾಮರಾಜನಗರ, ಮಾ.4: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾಹನಗಳಿಂದ ಸಂಭವಿಸುವ ಅಪಘಾತದಿಂದ ಉಂಟಾಗುವ ಭೀಕರ ಪರಿಣಾಮಗಳು ಮತ್ತು ಅಪಘಾತಕ್ಕೆ ಒಳಗಾದವರಿಗೆ ಲಭಿಸುವ ಪರಿಹಾರ, ಸೌಲಭ್ಯಗಳು, ರಸ್ತೆ ಸುರಕ್ಷತೆ ಕುರಿತು ಜಾಗೃತಿಗಾಗಿ ಇತ್ತೀಚೆಗೆ ನಗರದಲ್ಲಿ ಪ್ರದರ್ಶಿಸಿದ ನಾಟಕ ಪ್ರದರ್ಶನವು ಸುಂದರವಾಗಿ ಮೂಡಿಬಂದಿತು.
ಸಾರಿಗೆ ನಿಗಮದ ಕೇಂದ್ರ ಕಚೇರಿಯ ಸೂಚನೆಯಂತೆ ನಿಗಮದ ಸಾಂಸ್ಕೃತಿಕ ಕೆ.ಎಸ್.ಆರ್.ಟಿ.ಸಿ ಕಲಾವಿದರು ನಗರದ ಬಸ್ ಡಿಪೋ ಹಾಗೂ ಬಸ್ ನಿಲ್ದಾಣದಲ್ಲಿ ನಡೆಸಿಕೊಟ್ಟ ಬದುಕಿ-ಬದುಕಿಸಿ ನಾಟಕವು ಕೆ.ಎಸ್.ಆರ್.ಟಿ.ಸಿ.ಯ ಪ್ರಯಾಣಿಕ ಸುರಕ್ಷತೆ, ಸಂಚಾರ ನಿಯಮಗಳ ಪಾಲಿಸುವಿಕೆ, ವಿದ್ಯಾರ್ಥಿ ಮತ್ತು ವಿಶೇಷಚೇತನರ ಬಸ್ ಪಾಸ್, ಅಪಘಾತ ಸಂದರ್ಭದಲ್ಲಿ ದೊರೆಯುವ ಪರಿಹಾರ ಹೀಗೆ ನಿಗಮದಿಂದಾಗುವ ಅನುಕೂಲಗಳ ಬಗ್ಗೆ ಹಾಗೂ ಸಂಸ್ಥೆಯು ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಯ ಬಗ್ಗೆ ಮಾಹಿತಿ ನೀಡುವುದರ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ ಜನಮನ ಗೆದ್ದರು.
ನಾಟಕ ಉದ್ಘಾಟಿಸಿದ ಪೊಲೀಸ್ ಉಪ ಅಧೀಕ್ಷಕರಾದ ಜೆ. ಮೋಹನ್ ಅವರು, ವೃತ್ತಿ ಜೀವನದಲ್ಲಿ ಉತ್ತಮ ಸಹಾಯ ಗುಣಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇಲಾಖೆಯು ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು ಸಾರ್ವಜನಿಕರು ಕೈ ಜೊಡಿಸಿ ಸಹಕರಿಸಬೇಕಾಗಿದೆ. ಚಾಲಕರು ಮತ್ತು ಸಾರ್ವಜನಿಕರ ನಿರ್ಲಕ್ಷ್ಯದ ಬಗ್ಗೆ ನಾಟಕದಲ್ಲಿ ತಿಳಿಸಲಾಗಿದ್ದು ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
ಇದೇ ವೇಳೇ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ ರವಿ ಅವರು ಮಾತನಾಡಿ ಬಸ್ಸಿನಲ್ಲಿ ಸಂಚಾರಿಸುವಾಗ ಸಾಮಾನ್ಯವಾಗಿ ನಡೆಯುವಂತಹ ಘಟನೆಗಳನ್ನು ಗಮನಿಸಿ ಅಭಿನಯಿಸಿರುವುದನ್ನು ಕಾಣಬಹುದಾಗಿದ್ದು, ಇಲಾಖೆಯು ತನ್ನ ಸಿಬ್ಬಂಧಿಗಳಿಗೆ ಮತ್ತು ಸಾರ್ವಜನಿಕರಿಗೆ ನಾಟಕದ ಮೂಲಕ ಅನೇಕ ಜವಾಬ್ದಾರಿಯುತ ಸಂದೇಶಗಳನ್ನು ನೀಡಿದೆ ಎಂದರು.
ಪ್ರತಿ ಸರ್ಕಾರಿ ಬಸ್ಸಿನಲ್ಲಿರುವ ಪ್ರಥಮ ಚಿಕ್ಸಿತೆಯ ಪೆಟ್ಟಿಗೆಯನ್ನು ಅಪಘಾತದ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಿ ಎಂದು ಚಾಲಕ ಮತ್ತು ನಿರ್ವಾಹಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರದ ಸರ್ಕಲ್ ಇನ್ಸ್ಪೆಕ್ಟರ್ ನಾಗೇಗೌಡ, ಗ್ರಾಮಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಲೋಹಿತ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಸಂಚಾಲನ ಅಧಿಕಾರಿ ಪರಮೇಶ್ವರಪ್ಪ, ವಿಭಾಗೀಯ ತಾಂತ್ರಿಕ ಶಿಲ್ಪಿ ಸೂರ್ಯಕಾಂತ್, ಚಾಮರಾಜನಗರ ಘಟಕದ ವ್ಯವಸ್ಥಾಪಕರಾದ ಕುಮಾರ್ ನಾಯಕ್ ಮತ್ತು ಕೆ.ಎಸ್.ಆರ್.ಟಿ.ಸಿ ಸಾಂಸ್ಕೃತಿಕ ಕಲಾ ತಂಡದ ನಿರ್ದೇಶಕ ಬಾಲಕೃಷ್ಣ ಉಪಸ್ಥಿತರಿದ್ದರು.