ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ: ದೊರೆಸ್ವಾಮಿಗೆ ಎಚ್.ವಿಶ್ವನಾಥ್ ನೀಡಿದ ಸಲಹೆ ಏನು ಗೊತ್ತಾ ?

Update: 2020-03-04 16:53 GMT

ಮೈಸೂರು,ಮಾ.4: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ  ಮಾಜಿ ಸಚಿವ ಹೆಚ್.ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಸರಿಯಿಲ್ಲ, ದೊರೆಸ್ವಾಮಿಯೂ ಸರಿಯಿಲ್ಲ ಎಂದು ಹೇಳಿದ್ದಾರೆ. 

ಮೈಸೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವನಾಥ್, ದೊರೆಸ್ವಾಮಿಯವರು ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಅವರ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ. ಅವರು ಎಲ್ಲದಕ್ಕೂ ಬಾಯಿ, ತಲೆ ಹಾಕಬಾರದು. ಪಕ್ಷದ ವಕ್ತಾರರಂತೆ ಮಾತನಾಡಬಾರದು. ನಿಮ್ಮ ಗೌರವ ಉಳಿಸಿಕೊಳ್ಳಿ, ರಾಜಕೀಯದ ಕೊಳಚೆಗೆ ಹೋಗಿ ಬೀಳಬೇಡಿ. ರಾಜಕೀಯ ಪಕ್ಷಗಳಿಗೆ ನೀವು ದಾಳವಾಗಬೇಡಿ. ಯಾರ ಬಗ್ಗೆಯೂ ನೀವು ಏನು ಏನೋ ಮಾತನಾಡವುದು ಕೂಡ ಸರಿಯಲ್ಲ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಮಾತೆತ್ತಿದರೆ 14 ಬಾರಿ ಬಜೆಟ್ ಮಂಡನೆ ಅಂತಾರೆ. ಆದರೆ ಬಜೆಟ್‍ನಲ್ಲಿ ಆರ್ಥಿಕ ಶಿಸ್ತು, ಶಿಷ್ಟಾಚಾರ ತರಲು ಆಗಲಿಲ್ಲ. ರಾಜ್ಯಕ್ಕೆ ಮೂರು ಲಕ್ಷ ಕೋಟಿ ರೂ. ಸಾಲದ ಹೊರೆ ಇದೆ. ಅದರಲ್ಲಿ ಸಿದ್ದರಾಮಯ್ಯ ಅವರದ್ದೇ ಒಂದೂವರೆ ಲಕ್ಷ ಕೋಟಿ ರೂ. ಸಾಲದ ಪಾಲಿದೆ. ಮಾಜಿ ಮುಖ್ಯಮಂತ್ರಿ ಪರಮಾಧಿಕಾರದ ಹೆಸರಿನಲ್ಲಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದೀರಿ ಎಂದು ಹರಿಹಾಯ್ದರು.

ಮಾತೆತ್ತಿದ್ದರೆ ಸಿದ್ದರಾಮಯ್ಯ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಾರೆ. ಎರಡು ದಿನ ವಿಧಾನಸಭೆ ನಡೆಯದಂತೆ ತಡೆ ಮಾಡಿದ್ದೀರಾ. ಏನಿದರ ಅರ್ಥ ? ಬರೀ ರಾಜಕೀಯ ಮಾಡೋದಾ? ಎಂದು ಪ್ರಶ್ನಿಸಿದರು.

ಜಗಳ ಮಾಡುವುದಕ್ಕೆ, ಆರೋಪ ಪ್ರತ್ಯಾರೋಪಕ್ಕಾಗಿ ವಿಧಾನಸಭೆ ಇರುವುದಲ್ಲ. ಅದು ಜನರ ಹಿತದೃಷ್ಟಿಯ ಚರ್ಚೆಗಾಗಿ ಇರುವುದು. ಇದನ್ನು ಅರಿತು ವಿಪಕ್ಷಗಳು ರಾಜ್ಯದ ಅಭಿವೃದ್ದಿಯ ವಿಚಾರ ಚರ್ಚೆ ಮಾಡಿ ಎಂದು ತಿಳಿಸಿದರು.

ರಾಜ್ಯ ಬಜೆಟ್ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಬಜೆಟ್ ಮಂಡನೆ ಕೇವಲ ಶಾಸ್ತ್ರವಾಗಬಾರದು. ಬಜೆಟ್ ಸರ್ಕಾರದ ಜನಪ್ರಿಯತೆ ಹೆಚ್ಚಿಸುವುದಲ್ಲ. ಹೀಗಾಗಿ ಜನರ ಅನುಕೂಲಕ್ಕಾಗಿ ಬಜೆಟ್ ಮಾಡಬೇಕು ಎಂದು ಹೇಳಿದರು.

ಯಡಿಯೂರಪ್ಪನವರೇ ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ. ಬೇಕಾಬಿಟ್ಟಿ ಯೋಜನೆಗಳ ಘೋಷಣೆ ಬೇಡ. ಉಳಿತಾಯದ ಬಜೆಟ್ ಮಾಡಿ. ಎಲ್ಲಾ ಸಿಎಂಗಳು 10 ವರ್ಷದ ಬಜೆಟ್ ಮಂಡನೆ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಾಡಿ ಸಾಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News