ಕಲಬುರಗಿಯ ಮೃತ ವ್ಯಕ್ತಿಯಲ್ಲಿ ಕೊರೋನ ಇದ್ದ ಬಗ್ಗೆ ವೈದ್ಯಕೀಯ ವರದಿ ದೃಢೀಕರಿಸಿಲ್ಲ: ಜಿಲ್ಲಾಧಿಕಾರಿ

Update: 2020-03-11 15:33 GMT

ಕಲಬುರಗಿ: ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ ಮತ್ತು ವಯೋಸಹಜ ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮಹ್ಮದ್ ಹುಸೇನ್ ಸಿದ್ದೀಕಿ (76) ಅವರು ನಿಧನರಾಗಿದ್ದು, ಕೊರೋನ ವೈರಸ್‌ನಿಂದ ನಿಧನವಾಗಿದ್ದಾರೆ ಎಂಬುದನ್ನು ವೈದ್ಯಕೀಯ ವರದಿ ಇನ್ನೂ ದೃಢೀಕರಿಸಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ.ಸ್ಪಷ್ಟನೆ ನೀಡಿದಾರೆ.

ಬುಧವಾರ ಕಲಬುರಗಿ ನಗರದ ವಾರ್ತಾ ಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು ಮಹ್ಮದ್ ಹುಸೇನ್ ಸಿದ್ದೀಕಿ ಅವರಿಗೆ ಮಾ.9 ರಂದು ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರ ಅತಿಯಾಗಿ ಕಾಣಿಸಿದ್ದರಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅದೇ ದಿನ ರಾತ್ರಿ ವೈದ್ಯಕೀಯ ಸಲಹೆ ಕಡೆಗಣಿಸಿ ಕುಟುಂಬಸ್ಥರು ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಯೂ ಗುಣಮುಖರಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ರೋಗಿಯನ್ನು ಮಾ.10 ರಂದು ಮಧ್ಯಾಹ್ನ ಡಿಸ್‌ಚಾರ್ಜ್ ಮಾಡಿದ್ದು, ಆದರೆ ಕಲಬುರಗಿಗೆ ಬರುವ ಮಾರ್ಗಮಧ್ಯದಲ್ಲಿಯೇ ರೋಗಿ ನಿಧನರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಕೆಮ್ಮು, ಜ್ವರದಿಂದ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾದ ಕೂಡಲೇ ಇದನ್ನು ಶಂಕಿತ ಕೊರೋನ ವೈರಸ್ ಎಂದು ಭಾವಿಸಿಕೊಂಡು ಮಾ.9 ರಂದೇ ವ್ಯಕ್ತಿಯ ಗಂಟಲು ದ್ರವ್ಯ ಸ್ಯಾಂಪಲ್ ಪಡೆದು ಬೆಂಗಳೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಾಜಿಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನೂ ವರದಿ ಬಂದಿಲ್ಲ ಎಂದರು.

ಇನ್ನು ನಿಧನ ಹೊಂದಿದ ವ್ಯಕ್ತಿ ಕುಟುಂಬಸ್ಥರು ಮತ್ತು ಸಂಬಂಧಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇದುವರೆಗೆ ಅವರ ಕುಟುಂಬದ ಸದಸ್ಯರಲ್ಲಿ ಶಂಕಿತ ಕೊರೋನಾ ವೈರಸ್‌ನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆತಂಕಕ್ಕೊಳಗಾಬೇಡಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್ ಎಲ್ಲರೂ ಬಳಸುವ ಅವಶ್ಯಕತೆಯಿಲ್ಲ. ಅದೂ ವೈದ್ಯಕೀಯ ವೃತ್ತಿಪರರು ಸುರಕ್ಷತಾ ದೃಷ್ಟಿಯಿಂದ ಬಳಕೆ ಮಾಡಿಕೊಳ್ಳುತ್ತಾರೆ. ರೋಗ ನಿರೋಧಕ ಶಕ್ತಿ ಕಮ್ಮಿಯಿರುವ ವ್ಯಕ್ತಿಗಳು ಇದನ್ನು ಬಳಸಬಹುದಾಗಿದೆ. 

ಸುರಕ್ಷತಾ ಕ್ರಮ ವಹಿಸಿ: ಕೊರೋನ ವೈರಸ್ ಸೊಂಕು ಹರಡದಂತೆ ಸುರಕ್ಷತಾ ಕ್ರಮವಾಗಿ ಹ್ಯಾಂಡ್ ಶೇಕ್ ಮಾಡಬಾರದು, ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ಅಂತರ ಕಾಯ್ದುಕೊಳ್ಳುವುದು, ಕೆಮ್ಮು, ನೆಗಡಿ, ಶೀತವಾದಾಗ ಕರವಸ್ತ್ರ ಕಡ್ಡಾಯವಾಗಿ ಬಳಸಬೇಕು. ಕೆಮ್ಮು, ನೆಗಡಿ, ತೀವ್ರ ಜ್ವರದ ಲಕ್ಷಣ ಕಾಣಿಸಿದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಶರತ್ ಬಿ. ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ.ಎ.ಜಬ್ಬಾರ್ ಮಾತನಾಡಿ, ಮಹ್ಮದ್ ಹುಸೇನ್ ಸಿದ್ದೀಕಿ ಅವರು ಜನವರಿ 29 ರಂದು ಸೌದಿ ಅರೇಬಿಯಾ ಪ್ರವಾಸಕ್ಕೆ ಹೋಗಿ ಫೆಬ್ರವರಿ 29 ರಂದು ಹೈದರಾಬಾದ್ ಮಾರ್ಗವಾಗಿ ಕಲಬುರಗಿಗೆ ಮರಳಿದ್ದಾರೆ. ಮರಳಿದ ನಂತರ ಆರೋಗ್ಯವಾಗಿಯೇ ಇದ್ದ ಅವರು ವಯೋಸಹಜ ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರ ಕಾಣಿಸಿದ್ದರಿಂದ ಮಾರ್ಚ್ 5 ರಂದು ಕುಟುಂಬ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ರೋಗ ವಾಸಿಯಾಗದ ಕಾರಣ ಮಾರ್ಚ್ 9 ರಂದು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಆರೋಗ್ಯ ಇತಿಹಾಸವನ್ನು ನೋಡಿದಾಗ ಎರಡು ವರ್ಷದಿಂದ ಶ್ವಾಸಕೋಶ, ಅಸ್ತಮಾ, ಬಿ.ಪಿ ಯಿಂದ ಸಹ ಬಳಲುತ್ತಿದ್ದರು ಎಂಬುದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.

ಅಂತ್ಯಕ್ರಿಯೆಲ್ಲಿಯೂ ಎಚ್ಚರಿಕೆ ಕ್ರಮ: ಶಂಕಿತ ವ್ಯಕ್ತಿ ಸಾವನಪ್ಪಿದ್ದರಿಂದ ಮನೆಗೆ ಭೇಟಿ ನೀಡದ್ದು, ಕುಟಂಬಸ್ಥರು ಮತ್ತು ಸಂಬಂಧಿಕರ ಆರೋಗ್ಯ ದೃಷ್ಟಿಯಿಂದ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಅವರಿಗೆ ಸಲಹೆ ನೀಡಲಾಗಿದೆ. ಅಲ್ಲದೆ ಮೃತದೇಹವನ್ನು ಸ್ಯಾನಿಟೈಜರ್‌ನಲ್ಲಿಡಲಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News