ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಪತ್ತೆಯಾಗಿಲ್ಲ: ಡಿಸಿ ಡಾ.ವೆಂಕಟೇಶ್

Update: 2020-03-16 18:08 GMT

ಮಂಡ್ಯ, ಮಾ.16: ಕೊರೋನ ವೈರಸ್‍ಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಿಂದ 25 ಜನ ಜಿಲ್ಲೆಗೆ ಮರಳಿದ್ದು, ಅವರನ್ನು ಕೇಂದ್ರ ಸರಕಾರ ನೀಡಿರುವ ಪೋರ್ಟಾಕಾಲ್ ಪ್ರಕರಣದಂತೆ ನಡೆಸಿಕೊಂಡು ಬರಲಾಗಿದೆ. ಇದುವರೆಗೂ ಅವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಅವರು 14 ದಿವಸಗಳ ಕಾಲ ಅವರ ಮನೆಗಳಲ್ಲೆ ವಾಸವಾಗಿರುತ್ತಾರೆ. ಒಂದು ವೇಳೆ  ರೋಗ ಲಕ್ಷಣಗಳು ಕಂಡುಬಂದಲ್ಲಿ ನಿಯಮಾನುಸಾರ ಅವರನ್ನು ತಪಾಸಣೆಗೆ ಒಳಪಡಿಸಿ ಐಸೋಲೇಷನ್ ವಾರ್ಡ್‍ನಲ್ಲಿ ಇರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. 

ಜಿಲ್ಲೆಯಲ್ಲಿ ಜನರು ಗುಂಪು ಗುಂಪಾಗಿ ಸೇರಬಾರದುದೆಂದು ಹೀಗಾಗಲೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ  ರಂಗನತಿಟ್ಟು ಹಾಗೂ ಕೆ.ಆರ್.ಎಸ್ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದ್ದು, ಮಾಲ್‍ಗಳು, ನೈಟ್ ಕ್ಲಬ್‍ಗಳು, ಸ್ವಿಮಿಂಗ್ ಫೂಲ್‍ಗಳು ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಕೂಡ ಸ್ವಯಂ ಪ್ರೇರಿತವಾಗಿ ಸಹಕರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕೊರೋನ ವೈರಸ್ 6ನೇ ವೈರಸ್ ಹಾಗಿದ್ದು, ಪರಿಸರದಲ್ಲಿ ಹೆಚ್ಚಿನ ಉಷ್ಣಾಂಶವಿತ್ತದೆಂದರೆ ಅದರ ಪ್ರಸರಣ ಕಡಿಮೆ ಇರುತ್ತದೆ. ಹೀಗಾಗಲೆ ತಾಪಮಾನ 30 ಡಿಗ್ರಿಗೂ ಹೆಚ್ಚು ಇದೆ. 25 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದಂತಹ ಸಂದರ್ಭದಲ್ಲಿ ಕೊರೋನ ವೈರಸ್ ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಆದರೆ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಎಂದು ಅವರು ಮನವಿ ಮಾಡಿದರು.

ಸಾರ್ವಜನಿಕರು ಕೈಗಳನ್ನು ಸೋಪು ಅಥವಾ ಲಿಕ್ವಿಡ್‍ಗಳ ಮೂಲಕ ತೊಳೆದುಕೊಳ್ಳಬೇಕು. ಶುದ್ದವಾದ ಗಾಳಿ ಹಾಗೂ ಬೆಳಕಿನಲ್ಲಿ ಇರಬೇಕು. ಪರಸ್ಪರ ಕೈಕುಲುಕುವುದು ಹಾಗೂ ನಿಕಟ ಸಂಪರ್ಕ ಹೊಂದುವುದನ್ನು ನಿಯಂತ್ರಿಸಬೇಕು. ಇವುಗಳ ನಿರಂತರ ಪ್ರಕ್ರಿಯೆಯಿಂದ ಕೊರೋನೊ ವೈರಸ್‍ನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬಹುದು. ಒಟ್ಟಾರೆಯಾಗಿ ಸಾರ್ವಜನಿಕರು ಶುಚಿತ್ವವನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News