ಬೆಳೆ ಹಾನಿ ಪರಿಹಾರ ವಿತರಿಸುವಲ್ಲಿ ಅಕ್ರಮ ಆರೋಪ: ಮೂವರು ಗ್ರಾಮ ಲೆಕ್ಕಿಗರ ಅಮಾನತು

Update: 2021-03-12 12:30 GMT

ಬೆಳಗಾವಿ, ಮಾ.19: ಉತ್ತರ ಕರ್ನಾಟಕದಲ್ಲಿ ಕಳೆದ ವರ್ಷ ಉಂಟಾದ ಪ್ರವಾಹ ಮತ್ತು ಅತಿವೃಷ್ಟಿಯಿಂದ ಆದ ಬೆಳೆ ಹಾನಿಯ ಪರಿಹಾರ ವಿತರಿಸುವಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ರಾಯಭಾಗ ತಾಲೂಕಿನ ಮೂವರು ಗ್ರಾಮ ಲೆಕ್ಕಿಗರನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ರಾಯಭಾಗ ತಾಲೂಕಿನ ಭಿರಡಿ ಗ್ರಾಮ ಲೆಕ್ಕಿಗ ಬಿ.ಪಿ.ಹಳ್ಳಿ, ಜಲಾಲಪೂರದ ಪಿ.ಎಂ. ಹಾಲವಡೆರ್ ಮತ್ತು ದಿಗ್ಗೆವಾಡಿಯ ಎಸ್.ಎ.ಬಸ್ತವಾಡೆ ಅವರನ್ನು ಅಪರ ಜಿಲ್ಲಾಧಿಕಾರಿ ಆಮಾನತುಗೊಳಿಸಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಿದ್ದಾರೆ.

ಬೆಳೆ ಪರಿಹಾರದಲ್ಲಿ ಅಕ್ರಮ ಎಸಗಿದ ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮ ಜರುಗಿಸಲು ಸಮಗ್ರ ವರದಿ ನೀಡುವಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಯವರು ರಾಯಭಾಗ ತಹಶೀಲ್ದಾರ ಅವರಿಗೆ ತಿಳಿಸಿದ್ದರು. ಅದರಂತೆ ತಹಶೀಲ್ದಾರ ಅವರು ನಡೆಸಿದ ತನಿಖೆಯಲ್ಲಿ, ಬೆಳೆ ಪರಿಹಾರಕ್ಕೆ ಸಂಬಂಧಪಟ್ಟಂತೆ ರಾಯಭಾಗ ತಾಲೂಕಿನಲ್ಲಿ ಒಟ್ಟು 799 ತಾಳೆಯಾಗದ ಪ್ರಕರಣಗಳು ಪತ್ತೆಯಾಗಿದ್ದವು. ಅವುಗಳಲ್ಲಿ 65 ಪ್ರಕರಣಗಳಲ್ಲಿ ಗ್ರಾಮ ಲೆಕ್ಕಿಗರು ದುರುದ್ದೇಶದಿಂದ ಫಲಾನುಭವಿಗಳನ್ನು ಹೊರಗಿಟ್ಟು, ಅನ್ಯ ವ್ಯಕ್ತಿಗಳ ಖಾತೆಗೆ ಹಣ ವರ್ಗಾಯಿಸಿರುವುದು ಕಂಡು ಬಂದಿತ್ತು.

ಭಿರಡಿ ಗ್ರಾಮ ಲೆಕ್ಕಿಗ 6 ಪ್ರಕರಣಗಳಲ್ಲಿ, ಜಲಾಲಪೂರ ಗ್ರಾಮ ಲೆಕ್ಕಿಗ 8 ಪ್ರಕರಣಗಳಲ್ಲಿ ಮತ್ತು ದಿಗ್ಗೇವಾಡಿಯ ಗ್ರಾಮ ಲೆಕ್ಕಿಗ ಒಟ್ಟು 51 ಪ್ರಕರಣಗಳಲ್ಲಿ ಪರಿಹಾರದ ಹಣವನ್ನು ಫಲಾನುಭವಿಗಳಲ್ಲದೆ ಇನ್ನೊಬ್ಬರ ಖಾತೆಗೆ ವರ್ಗಾಯಿಸಿರುವುದು ಪತ್ತೆಯಾಗಿದ್ದು, ಅನರ್ಹ ಫಲಾನುಭವಿಗಳಿಗೆ ಬೆಳೆ ಪರಿಹಾರದ ಹಣ ಸಂದಾಯ ಮಾಡಿ ಅವ್ಯವಹಾರ ನಡೆಸಿರುವುದು ಸಾಬೀತಾಗಿದೆ.

ಪರಿಹಾರ ವಿತರಣೆಯಲ್ಲಿ ನಡೆದ ಲೋಪಗಳಿಗೆ ಸಂಬಂಧಪಟ್ಟಂತೆ ಖಾಸಗಿ ಆಪರೇಟರ್‌ಗಳು, ಅವರಿಗೆ ಸಹಕರಿಸಿದ ವ್ಯಕ್ತಿಗಳು ಮತ್ತು ಅಕ್ರಮವಾಗಿ ಹಣ ಮಾಡಿಕೊಂಡ ಅನ್ಯ ವ್ಯಕ್ತಿಗಳ ವಿರುದ್ಧ ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News