ಕೇರಳ ನಮಗೆ ಮಾದರಿಯಾಗಬಾರದೇಕೆ?: ರಾಜ್ಯ ಸರಕಾರಕ್ಕೆ ಎಚ್‌ಡಿಕೆ ಪ್ರಶ್ನೆ

Update: 2020-03-20 13:13 GMT

ಬೆಂಗಳೂರು, ಮಾ.20: ಕೊರೋನ ವೈರಸ್‌ನಿಂದಾಗಿ ಹದಗೆಟ್ಟಿರುವ ಆರ್ಥಿಕತೆಗೆ ಚೈತನ್ಯ ನೀಡಲು ಕೇರಳ ಸರಕಾರ ಅಲ್ಲಿನ ಜನರಿಗೆ 20 ಸಾವಿರ ಕೋಟಿ ರೂ.ಪ್ಯಾಕೇಜ್ ಘೋಷಿಸಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. 

ಇದರಲ್ಲಿ, ಆರೋಗ್ಯ ಸೇವೆ, ಸಾಲಕ್ಕೆ ನೆರವು, ಮಾಸಾಶನ, ನರೇಗಾ ಯೋಜನೆಗೆ ಅನುದಾನ, ಉಚಿತ ದಿನಸಿ, ಕಡಿಮೆ ದರದಲ್ಲಿ ಊಟ, ಬಾಕಿ ಮರುಪಾವತಿ, ಪರಿಹಾರ ಮೊತ್ತಗಳು ಸೇರಿವೆ. ಕೇರಳದ ಈ ನಡೆ ನಮಗೆ ಮಾದರಿಯಾಗಬಾರದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಕೇರಳದಲ್ಲಿ 26 ಕೊರೋನ ಪ್ರಕರಣ ವರದಿಯಾಗಿದ್ದರೆ ಕರ್ನಾಟಕದಲ್ಲಿ 15 ಪ್ರಕರಣಗಳು ವರದಿಯಾಗಿವೆ. ಅಂದರೆ ರಾಜ್ಯದಲ್ಲಿ ಮಹಾಮಾರಿಯ ಬಗೆಗಿನ ಆತಂಕ, ಭೀತಿ ಕೇರಳಕ್ಕಿಂತಲೂ ಭಿನ್ನವೇನಲ್ಲ. ಇದು ರಾಜ್ಯದ ಆರ್ಥಿಕತೆಗೂ ಪೆಟ್ಟು ನೀಡುತ್ತಿದೆ. ಸದ್ಯ ಬಡ ವರ್ಗದ ಮೇಲೆ ಇದು ನೇರ ಪರಿಣಾಮ ಬೀರುತ್ತಿದೆ. ರಾಜ್ಯವೂ ಕೇರಳ ಮಾದರಿಯ ನಿರ್ಧಾರಕ್ಕೆ ಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆರೋಗ್ಯ ಸೇವೆಗೆ ಹೆಚ್ಚಿನ ಹಣ, ಬ್ಯಾಂಕ್ ಸಾಲಗಳ ತಿಂಗಳ ಕಂತು ಮುಂದೂಡಿಕೆ, ಬಡ್ಡಿ ಮನ್ನ, ಮಾಸಾಶನ, ನರೇಗಾ ಯೋಜನೆಗೆ ಅನುದಾನ, ಪರಿಹಾರ ಘೋಷಣೆಯಂಥ ನಿರ್ಧಾರಗಳನ್ನು ನಾವೂ ಕೈಗೊಳ್ಳಬೇಕು. ಆರ್ಥಿಕ ದುರ್ಬಲರಿಗೆ ನೆರವಾಗುವ ಮೂಲಕ ಆರ್ಥಿಕತೆಗೆ ಚೈತನ್ಯ ತುಂಬಬೇಕು. ಜೊತೆಗೆ ಕೊರೋನ ವೈರಸ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕೊರೋನ ವೈರಸ್‌ನಿಂದ ಎದುರಾದ ನಿರ್ಬಂಧಗಳಿಂದಾಗಿ ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು ಹೆಚ್ಚು ಬಾಧಿತರಾಗಿದ್ದಾರೆ. 2 ತಿಂಗಳ ಅವರ ಬದುಕಿಗೆ ನೆರವಾಗುವಂತೆ ಸರಕಾರ ಕಾರ್ಯಕ್ರಮ ರೂಪಿಸಬೇಕು. ಆಟೋ, ಕ್ಯಾಬ್ ಚಾಲಕರ ಬ್ಯಾಂಕ್ ಲೋನ್ ಕಂತು ಪಾವತಿಗೆ 2 ತಿಂಗಳ ವಿನಾಯಿತಿ ಕಲ್ಪಿಸಬೇಕು. ಈ ಮೂಲಕ ಸರಕಾರ ಬಡವರ ಪರ ನಿಲುವು ತಾಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News