ಕೊರೋನ ವೈರಸ್ ಸೋಂಕಿತ ಧಾರವಾಡದ ವ್ಯಕ್ತಿಯ ಪ್ರಯಾಣದ ಮಾಹಿತಿ ಬಿಡುಗಡೆ
ಹುಬ್ಬಳ್ಳಿ, ಮಾ.22: ಧಾರವಾಡ ಹೊಸ ಯಲ್ಲಾಪುರದ ನಿವಾಸಿಯೋರ್ವನಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ವಿದೇಶದಲ್ಲಿದ್ದ ಆತ ಅಲ್ಲಿಂದ ಪ್ರಯಾಣಿಸಿದ ಮಾರ್ಗದ ಬಗ್ಗೆ ಜಿಲ್ಲಾಡಳಿತ ರೂಟ್ ಮ್ಯಾಪ್ ತಯಾರಿಸಿದೆ.
ಕೊರೋನ ಬಾಧಿತ ಆ ವ್ಯಕ್ತಿಯು ಮಾ. 11 ರಂದು ಆಸ್ಟ್ರೇಲಿಯಾ ದೇಶದ ಪರ್ತ್ ನಗರದಿಂದ ಪ್ರಯಾಣ ಪ್ರಾರಂಭಿಸಿದ್ದಾನೆ. ಅಲ್ಲಿಂದ ಇಎ 421 ಎಮಿರೇಟ್ಸ್ ವಿಮಾನದ ಮೂಲಕ ದುಬೈ ತಲುಪಿದ್ದಾನೆ. ದುಬೈನಿಂದ ಒಮನ್ ಏರ್ ಲೈನ್ಸ್ ಮೂಲಕ 12:35ಕ್ಕೆ ಮಸ್ಕತ್ ನಗರ ತಲುಪಿದ್ದಾನೆ. ಮಾ.12ರಂದು ಅಪರಾಹ್ನ 2:45 ಕ್ಕೆ ಮಸ್ಕತ್ ನಿಂದ ಒಮನ್ ಏರ್ ಲೈನ್ಸ್ ಮೂಲಕ ಹೊರಟು ಸಂಜೆ 7 ಗಂಟೆಗೆ ಗೋವಾ ವಿಮಾನ ನಿಲ್ದಾಣ ತಲುಪಿದ್ದಾನೆ.
ಗೋವಾ ವಿಮಾನ ನಿಲ್ದಾಣದಿಂದ ಬಾಡಿಗೆ ಸ್ಕೂಟರ್ ಪಡೆದು ಪಣಜಿ ಬಸ್ ತಲುಪಿದ್ದಾನೆ. ಅಂದೇ ರಾತ್ರಿ 8 :16ಕ್ಕೆ ವಾಹನ ಸಂಖ್ಯೆ ಕೆ.ಎ.26 ಎಫ್ 962 ಪಣಜಿ - ಗದಗ ಬೆಟಗೇರಿ ಕೆಎಸ್ಸಾರ್ಟಿಸಿ ಬಸ್ ಮೂಲ ಪ್ರಯಾಣ ಮಾಡಿ, ಮಾ.13ರಂದು ಮುಂಜಾನೆ 1 ಗಂಟೆಗೆ ಧಾರವಾಡ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಅಲ್ಲಿಂದ ಆಟೋ ಮೂಲಕ ಧಾರವಾಡದ ತನ್ನ ಮನೆ ಸೇರಿದ್ದಾನೆ.
ಆ ಬಳಿಕ ಮಾ.17ರಂದು ಅನಾರೋಗ್ಯದ ಕಾರಣ ಧಾರವಾಡದ ಸ್ಪಂದನಾ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಮಾ.18-ರಂದು ಹೆಚ್ಚಿನ ಚಿಕಿತ್ಸೆಗಾಗಿ ಎಸ್ ಡಿ ಎಂ ಆಸ್ಪತ್ರೆಯ ರೂಮ್ ನಂಬರ್ 4ರಲ್ಲಿ ದಾಖಲಾಗಿದ್ದು ಅಲ್ಲಿ ಮಾ.21ರವರೆಗೆ ಚಿಕಿತ್ಸೆ ಪಡೆದಿದ್ದಾನೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ವ್ಯಕ್ತಿ ಪ್ರಯಾಣಿಸಿರುವ ವಿಮಾನ, ಬಸ್, ಆಟೋ ಮೂಲಕ ಪ್ರಯಾಣಿಸಿದ್ದಾನೆ. ಆತ ಭೇಟಿ ನೀಡಿರುವ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಆ ಸಮಯದಲ್ಲಿ ಹಾಜರಿದ್ದ ಸಾರ್ವಜನಿಕರಿಗೂ ಸೋಂಕು ತಗಲುವ ಸಾಧ್ಯತೆ ಇರುವುದರಿಂದ , ಅಂತಹವರು ತಮ್ಮ ಮನೆಯಿಂದ ಹೊರಬರದೇ ಕಡ್ಡಾಯವಾಗಿ ಸ್ವಯಂ ನಿರ್ಬಂಧದಲ್ಲಿರಬೇಕು. ಕೋರೊನ ಸಹಾಯವಾಣಿ 104 ಮತ್ತು 1077 ನಂಬರ್ ಗಳಿಗೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.