ಕಲಬುರಗಿ: ಕೊರೋನ ಹರಡದಂತೆ ನಗರದಲ್ಲೆಡೆ ಔಷಧ ಸಿಂಪಡಣೆ
Update: 2020-03-23 23:02 IST
ಕಲಬುರಗಿ, ಮಾ.23: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ನಗರದಾದ್ಯಂತ ಔಷಧಿ ಸಿಂಪರಣೆ ಕಾರ್ಯ ನಡೆದಿದೆ.
ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ಸಿ. ರೇವೂರ ಅವರ ಸಲಹೆಯಂತೆ ಸೋಮವಾರದಿಂದ ಬೆಳಗ್ಗೆ ಮತ್ತು ಸಾಯಂಕಾಲ ನೀರು ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣವುಳ್ಳ ಹೈಪೊಫ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಮತ್ತು ನೀರು, ಫಿನೈನ್ ಹಾಗೂ ಡೆಟಾಲ್ ಮಿಶ್ರಣವುಳ್ಳ ಡಿಸ್ಇನ್ಫೆಕ್ಷನ್ ಔಷಧಿ ಸಿಂಪರಣೆ ಕಾರ್ಯ ಆರಂಭಗೊಂಡಿದ್ದು, ಸೋಮವಾರ ಸಿಂಪರಣೆ ನಡೆಯುವ ವೇಳೆ ಶಾಸಕ ದತ್ತಾತ್ರೇಯ ಪಾಟೀಲ ಸಿ. ರೇವೂರ ಮತ್ತು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ಭೇಟಿ ನೀಡಿ ವೀಕ್ಷಿಸಿದರು.
ಔಷಧಿ ಸಿಂಪರಣೆ ಕಾರ್ಯ ಮುಂದಿನ ಒಂದು ತಿಂಗಳ ಕಾಲ ನಡೆಯಲಿದ್ದು, ಇದಕ್ಕಾಗಿ ಪ್ರತ್ಯೇಕ ಟ್ಯಾಂಕರ್ ವಾಹನ ಸಿದ್ಧಪಡಿಸಲಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.