ಶಿವಮೊಗ್ಗ: ಸತ್ತ ಕೋಳಿಗಳ ಸೂಕ್ತ ವಿಲೇವಾರಿ ಮಾಡದ ಆರೋಪ; ಪ್ರಕರಣ ದಾಖಲು
ಶಿವಮೊಗ್ಗ, ಮಾ.25: ಕೋಳಿ ಫಾರಂನಲ್ಲಿ ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದರೂ, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ನಿರ್ಲಕ್ಷ್ಯ ತೋರಿದ ಪ್ರಕರಣದಲ್ಲಿ ಶಿಕಾರಿಪುರ ಅಂಬರಗೊಪ್ಪ ನಿವಾಸಿ ರಂಗಸ್ವಾಮಿ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು ತಿಳಿಸಿದ್ದಾರೆ.
ತನ್ನ ಅಡಿಕೆ ತೋಟದಲ್ಲಿರುವ ಕೋಳಿ ಫಾರಂನಲ್ಲಿ ನೂರಾರು ಕೋಳಿಗಳು ಸತ್ತು ಬಿದ್ದಿದ್ದರೂ, ಅದನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು ಕಂಡು ಬಂದಿದೆ. ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾದರೆ ಮಾಹಿತಿಯನ್ನು ಒದಗಿಸುವಂತೆ ಈ ಮೊದಲು ಸೂಚನೆ ನೀಡಿದ್ದರೂ, ಈ ವ್ಯಕ್ತಿ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾನೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಜವಾಬ್ದಾರಿ ಪಾಲಿಸಲು ವಿಫಲರಾಗಿರುವ ಸದರಿ ವ್ಯಕ್ತಿಯನ್ನು ಬುಧವಾರ ದಸ್ತಗಿರಿ ಮಾಡಿ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.