ಮಕ್ಕಳು, ವೃದ್ಧರು ಮನೆಯಿಂದ ಹೊರಬರಬಾರದು: ಸಚಿವ ಡಾ.ಕೆ.ಸುಧಾಕರ್ ಮನವಿ

Update: 2020-03-26 18:14 GMT

ಬೆಂಗಳೂರು, ಮಾ.26: ರಾಜಧಾನಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಮೂವತ್ತೊಂದು ಫಿವರ್ ಕ್ಲಿನಿಕ್(ಜ್ವರ ಚಿಕಿತ್ಸಾಲಯ)ಗಳು ಕಾರ್ಯಾರಂಭ ಮಾಡಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರೂ ಹಾಗೂ ಕಾರ್ಯಪಡೆಯ ಅಧ್ಯಕ್ಷರೂ ಆದ ಡಾ.ಕೆ.ಸುಧಾಕರ್ ಪ್ರಕಟಿಸಿದರು.

ಗುರುವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧದಲ್ಲಿ ಆಯೋಜಿಸಿದ್ದ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ ಎರಡು ತಿಂಗಳಲ್ಲಿ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸಿ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರು ಈ ಚಿಕಿತ್ಸಾಲಯಗಳಿಗೆ ತೆರಳಿ ಆರೋಗ್ಯ ತಪಾಸಣೆಗೆ ಒಳಗಾಗಬಹುದಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಇಪ್ಪತ್ತೈದು ಸಾವಿರದಿಂದ ಮೂವತ್ತು ಸಾವಿರ ಜನರನ್ನು ಈ ಚಿಕಿತ್ಸಾಲಯಗಳಲ್ಲಿ ತಪಾಸಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಜ.21ರಿಂದ ಈವರೆಗೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ಮಂದಿ ಬೆಂಗಳೂರಿಗೆ ವಿದೇಶಗಳಿಂದ ಆಗಮಿಸಿದ್ದು, ಅವರೆಲ್ಲರ ಪ್ರವಾಸಿ ಚರಿತ್ರೆ ಸರಕಾರದಲ್ಲಿ ಲಭ್ಯವಿದೆ. ಆದರೆ, ಅವರಲ್ಲಿ ಕೇವಲ 1,500 ಮಂದಿಯನ್ನು ಕೊರೋನ ಸೋಂಕು ಪತ್ತೆ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಇದೀಗ ವಿದೇಶಗಳಿಂದ ಆಗಮಿಸಿರುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಆತಂಕ ನಿವಾರಣೆಯಾಗಲಿದೆ ಎಂದು ನುಡಿದರು.

ಕೇಂದ್ರ ಸರಕಾರದ ಮಾರ್ಗಸೂಚಿಗಳನ್ವಯ ರಾಜ್ಯ ಸರಕಾರವು ತ್ರೀ-ಟಿ(ಟ್ರೇಸ್, ಟೆಸ್ಟ್ ಅಂಡ್ ಟ್ರೀಟ್‍ಮೆಂಟ್) ಸೂತ್ರವನ್ನು ಅಳವಡಿಸಿಕೊಂಡಿದೆ. ಇದರನ್ವಯ ರೋಗ ಪತ್ತೆ, ವೈರಾಣು ಪರೀಕ್ಷೆ ಹಾಗೂ ಸೋಂಕು ದೃಢಪಟ್ಟಲ್ಲಿ ಚಿಕಿತ್ಸೆ ನೀಡಲಾಗುವುದು. ಹತ್ತು ವರ್ಷ ವಯೋಮಾನದ ಮಕ್ಕಳು ಹಾಗೂ 60 ವರ್ಷ ವಯೋಮಾನ ಮೀರಿದ ವೃದ್ಧರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವು ಕೊರೋನ ತಡೆಗೆ ಮುಂಜಾಗ್ರತಾ ಕೈಗೊಂಡಿದ್ದರೂ ಕೂಡಾ ಸೋಂಕು ದೃಢಪಟ್ಟವರ ಸಂಖ್ಯೆ 55ಕ್ಕೆ ಏರಿಕೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕೆಲವು ಪ್ರದೇಶಗಳಲ್ಲಿನ ವಸತಿ ಸಮುಚ್ಛಯಗಳಲ್ಲಿ ವಾಸವಾಗಿರುವ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇತರೆ ಸಿಬ್ಬಂದಿಯನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಇವರ ರಕ್ಷಣೆಗೆ ಸರಕಾರ ಮುಂದಾಗಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಕೋವಿಡ್-19 ರ ತಡೆಗೆ ಸಜ್ಜುಗೊಂಡಿವೆ. ಸರಕಾರಿ ಹಾಗೂ ಖಾಸಗಿ ಒಳಗೊಂಡಂತೆ ರಾಜ್ಯದ 47 ವೈದ್ಯಕೀಯ ಕಾಲೇಜುಗಳಲ್ಲಿ ಕೊರೋನ ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿಗಳಲ್ಲಿ ಮೀಸಲಿರಿಸಲಾಗಿದೆ. ಅಲ್ಲದೆ, ರಾಜ್ಯ ಸರಕಾರ ಪ್ರತ್ಯೇಕ ಸಂಪನ್ಮೂಲವನ್ನು ಮೀಸಲಿರಿಸಿದೆ. ಅಂತೆಯೇ, ಅಗತ್ಯ ಪರಿಕರ ಮತ್ತು ಉಪಕರಣಗಳನ್ನು ಖರೀದಿಸಲಾಗುತ್ತಿದೆ. ಖಾಸಗಿ ಡಿಸ್ಟಿಲರಿಗಳು ಸ್ಯಾನಿಟೈಜರ್‍ಗಳನ್ನು ತಯಾರಿಸಿ ಉಚಿತವಾಗಿ ನೀಡಲು ಮುಂದೆ ಬಂದಿರುವುದನ್ನು ಸ್ವಾಗತಿಸಿದ ಅವರು ರಾಜ್ಯ ಸರಕಾರದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಕೋವಿಡ್-19ಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಬೇಕೆಂದು ಸಾರ್ವಜನಿಕರೂ ಒಳಗೊಂಡಂತೆ ಉದ್ದಿಮೆದಾರರಲ್ಲಿ ಸಚಿವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News