×
Ad

ರೈತರು ಬೆಳೆದ ಬೆಳೆಯ ಮಾರಾಟಕ್ಕೆ ನಿರ್ಬಂಧ ಇಲ್ಲ: ಮಂಡ್ಯ ಡಿಸಿ ವೆಂಕಟೇಶ್ ಸ್ಪಷ್ಟನೆ

Update: 2020-03-29 18:32 IST

ಮಂಡ್ಯ, ಮಾ.29: ರೈತರು ಬೆಳೆದ ಬೆಳೆಯನ್ನು ಮಾರಾಟ ಹಾಗೂ ಸಾಗಾಣೆ ಮಾಡಲು ನಿರ್ಬಂಧ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಪಾಂಡವಪುರ ಮತ್ತು ಶ್ರೀರಂಗಪಟ್ಟಣದ ಇಬ್ಬರು ರೈತರು ತಾವು ಬೆಳೆದಿರುವ  ಟೊಮೆಟೊ ಮತ್ತು ಸಪೋಟ ಬೆಳೆಯನ್ನು ನಾಶ ಮಾಡಿರುವುದು ನನ್ನ ಗಮನಕ್ಕೆ ಬಂದಿದ್ದು, ದಯವಿಟ್ಟು ಯಾವ ರೈತರು ಇಂತಹ  ನಿರ್ಣಯಗಳನ್ನು ಕೈಗೊಳ್ಳುವುದನ್ನು ಬಿಡಿ ಎಂದು ಅವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಆಹಾರ ಪದಾರ್ಥಗಳು ಅಗತ್ಯ ತುಂಬಾ ಇದೆ ಹಾಗೂ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಗಣೆ ಮಾಡಲು ಯಾವುದೇ ರೀತಿಯ ನಿರ್ಬಂಧ ಇಲ್ಲ. ನೀವು ಯಾವುದೇ ಅಧಿಕಾರಿಗಳನ್ನು ಸಂಪರ್ಕಿಸದೆ ಈ ರೀತಿ ನಿರ್ಧಾರಗಳನ್ನು ಕೈಗೊಂಡರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದರು.

ನೀವು ಆ ರೀತಿ ನಾಶ ಮಾಡುವುದರ ಬದಲು ನಿಮ್ಮ ಅಕ್ಕಪಕ್ಕದ ಗ್ರಾಮದಲ್ಲಿ ನೀವೇ ಹೋಗಿ ಮಾರಾಟ ಮಾಡಿದರೆ ಬೇರೆಯವರಿಗೆ ಮಾದರಿ ಆಗಬಹುದಿತ್ತು. ನೀವು ಬೆಳೆದಿರುವ ಬೆಳೆಗಳನ್ನು ನಮ್ಮ ಜಿಲ್ಲಾ ಹಾಪ್ಕಾಮ್ಸ್ ವತಿಯಿಂದ ಖರೀದಿ ಮಾಡುತ್ತೇವೆ ಹಾಗೂ  ನೀವು ತಾಲ್ಲೂಕು ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗದ ಸಂದರ್ಭದಲ್ಲಿ  ನಮ್ಮ ಜಿಲ್ಲಾಧಿಕಾರಿಗಳ ಸಹಾಯವಾಣಿ ಅಥವಾ ಪೊಲೀಸ್ ಸಹಾಯವಾಣಿಗೆ ಸಂಪರ್ಕಿಸಿ ಎಂದು ತಿಳಿಸಿದರು.

ತರಕಾರಿ ಮತ್ತು ಆಹಾರ ಪದಾರ್ಥ ಸಾಗಣೆ ಮಾಡಲು ಯಾವುದೇ ರೀತಿಯ ನಿರ್ಬಂಧ ಇಲ್ಲ. ಎಲ್ಲ ರೈತರು ಧೃತಿಗೆಡದೆ ಆತಂಕಕ್ಕೆ ಒಳಗಾಗದೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News