ಲಾಕ್‍ಡೌನ್‍ನಿಂದ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಿ: ಸಿ.ಟಿ ರವಿ

Update: 2020-03-30 18:22 GMT

ಚಿಕ್ಕಮಗಳೂರು, ಮಾ.30: ದೇಶದಾದ್ಯಂತ ಲಾಕ್‍ಡೌನ್ ಮಾಡಿರುವ ಹಿನ್ನೆಲೆ ಜಿಲ್ಲೆಯ ಜನತೆಗೆ ತರಕಾರಿ, ದಿನಬಳಕೆಯ ಅಗತ್ಯ ವಸ್ತುಗಳು ಸೇರಿದಂತೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಎಪಿಎಂಸಿ ಮಾರುಕಟ್ಟೆ ಮಂಡಳಿ ಸದಸ್ಯರಿಗೆ ತಿಳಿಸಿದ್ದಾರೆ.

ಸೋಮವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಮ್.ಸಿ)ಗೆ ಭೇಟಿ ನೀಡಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದಾಸ್ತಾನುಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಟಲಿ, ಅಮೇರಿಕಾ, ಚೀನಾ ಸೇರಿದಂತೆ ಅನೇಕ ಮುಂದುವರಿದ ರಾಷ್ಟ್ರಗಳಲ್ಲಿ ಕೊರೋನ ಸೋಂಕಿನಿಂದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ನೋಡಿಯಾದರೂ ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಯಾವುದೇ ಉಡಾಫೆ ಮಾಡದೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ತಡೆಗಟ್ಟಲು ಪ್ರತಿಯೊಬ್ಬರು ಸಹಕರಿಸಬೇಕು. ಜನರು ಒಟ್ಟಾಗಿ ಗುಂಪು ಸೇರದೆ ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಂಡು ಕೆಲಸ  ನಿರ್ವಹಿಸಬೇಕೆಂದರು. 

ಬೇರೆ-ಬೇರೆ ಭಾಗಗಳಿಂದ ಜಿಲ್ಲೆಯ ಮಾರುಕಟ್ಟೆಗೆ ತರಕಾರಿ, ದಿನಸಿ, ಕೃಷಿ ಆಹಾರ ಧಾನ್ಯಗಳನ್ನು ಸಾಗಿಸಲು ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲ, ವ್ಯಾಪಾರಿಗಳು, ಮಾರುಕಟ್ಟೆಯ ಕೂಲಿ ಕಾರ್ಮಿಕರು ಗುಂಪಾಗಿ ಸೇರಿ ಕೆಲಸ ನಿರ್ವಹಿಸದೆ, ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದ ಅವರು, ಕೃಷಿ ಮಾರುಕಟ್ಟೆಯ ಮಳಿಗೆಗಳಲ್ಲಿ ಲಭ್ಯವಿರುವ ತರಕಾರಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿದ ಅವರು ಗ್ರಾಹಕರಿಗೆ ತರಕಾರಿ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೇ ನಿಗದಿತ ಬೆಲೆಯಲ್ಲಿ ದೊರಕುವಂತೆ ನೋಡಿಕೊಳ್ಳಬೇಕು ಎಂದು ವ್ಯಾಪಾರಿಗಳಿಗೆ ತಿಳಿಸಿದರು.

ಬಳಿಕ ನಗರದ ಎಐಟಿ ವೃತ್ತದ ಬಳಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಇರಿಸಲಾಗಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ನೀಡಿರುವ ಆಹಾರ ಮತ್ತು ವಸತಿ ವ್ಯವಸ್ಥೆಗಳ ಕುರಿತು ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 242 ಜನರ ಪೈಕಿ ಸೋಂಕಿನ ಕುರಿತು ಇದುವರೆಗೂ ಯಾವುದೇ ಸಕಾರಾತ್ಮಕ (ಪಾಸಿಟಿವ್) ಪ್ರಕರಣಗಳು ಕಂಡು ಬಂದಿಲ್ಲ, ಈ ಭಾಗದಲ್ಲಿನ ನಿರ್ಗತಿಕರು, ಅಲೆಮಾರಿಗಳು, ಅಸಹಾಯಕ ವೃದ್ಧರಿಗೆ ತಾತ್ಕಾಲಿಕ ಆಶ್ರಯ ವ್ಯವಸ್ಥೆ ಕಲ್ಪಿಸಿದ್ದು, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಆಹಾರದ ಪೂರೈಕೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶದಂತೆ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್, ಹಣ್ಣು- ತರಕಾರಿ, ದಿನಸಿ ಅಂಗಡಿಗಳು, ರಾಸಾಯನಿಕ ಗೊಬ್ಬರಗಳ ಅಂಗಡಿ ಸೇರಿದಂತೆ ಅಗತ್ಯವಾಗಿರುವುಗಳನ್ನು ತೆರೆಯಲು ಮಾತ್ರ ಅನುಮತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್ ಲಭ್ಯವಿದ್ದು ಎನ್-95 ಮಾಸ್ಕ್ ಗಳನ್ನು ಸೋಂಕಿತರು ಹಾಗೂ ಚಿಕಿತ್ಸೆ ನೀಡುವವರು ಮಾತ್ರ ಬಳಸಬೇಕಾಗಿದೆ. ಸಾಮಾನ್ಯ ಜನರು ಮಾಸ್ಕ್ ಅಥವಾ ಕರವಸ್ತ್ರಗಳನ್ನು ಬಳಸುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಈಗಾಗಲೇ ಜಿಲ್ಲೆಯ ಗಡಿ ಭಾಗಗಳಲ್ಲಿ ನಿರ್ಬಂಧ ಹೇರಲಾಗಿದ್ದು, ಬೇರೆ ಬೇರೆ ಭಾಗಗಳಿಂದ ಬರುವ ವಾಹನಗಳಿಗೆ ತಡೆಯೊಡ್ಡಲಾಗಿದೆ. ಕೆಲ ಗ್ರಾಮಗಳಲ್ಲಿ ಬೇರೆ ಭಾಗದವರು ಬಾರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ, ಸೋಂಕಿನ ಕುರಿತು ಅರಿವು ಮೂಡಿಸಲು ಸ್ವಯಂ ಸೇವಕರು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್ ಸೇರಿದಂತೆ ಮತ್ತಿತರರ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News