ಸಂಕಟದ ಕಾಲದಲ್ಲಿ ಸರಕಾರದ ನಡೆ ಪಾರದರ್ಶಕವಾಗಿರಲಿ

Update: 2020-03-31 18:07 GMT

ಹಿಂದೆಂದೂ ಕಂಡರಿಯದ ಕೊರೋನದಂಥ ಪಿಡುಗಿನಿಂದ ಇಡೀ ಭಾರತ ತತ್ತರಿಸಿ ಹೋಗಿದೆ. ಈ ಗಂಡಾಂತರದಿಂದ ದೇಶವನ್ನು ಪಾರು ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಣಗಾಡುತ್ತಿವೆ. ಸರಕಾರಗಳ ನಡೆಯ ಬಗ್ಗೆ ಅನುಮಾನವಿಲ್ಲ. ಆದರೆ ಆರಂಭದಿಂದಲೂ ಕೇಂದ್ರ ಸರಕಾರ ನಡೆದುಕೊಂಡ ರೀತಿಯ ಬಗ್ಗೆ ಕೆಲ ಪ್ರಶ್ನೆಗಳಿವೆ. ಈ ಪ್ರಶ್ನೆಗಳು ಪ್ರಶ್ನೆಗಳಾಗಿ ಉಳಿಯಬಾರದು. ಸರಕಾರ ತಕ್ಷಣ ಗೊಂದಲ ನಿವಾರಿಸಲು ಮುಂದಾಗಬೇಕು.

ಜನವರಿ 29ರಂದು ಮೊದಲ ಕೊರೋನ ಕೇಸ್ ಪತ್ತೆಯಾದ ನಂತರ ಸರಕಾರ ಎಚ್ಚೆತ್ತುಕೊಂಡಿದ್ದರೆ ದೇಶದ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ. ಆಗ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಆಮಂತ್ರಿಸಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಿದ ಬಗ್ಗೆ ಈಗಲೂ ಟೀಕೆಗಳು ಕೇಳಿ ಬರುತ್ತಿವೆ. ಹೋಗಲಿ ಆ ನಂತರವಾದರೂ ಸರಕಾರ ತನ್ನ ಲೋಪವನ್ನು ತಿದ್ದಿಕೊಂಡು ಸರಿಯಾದ ಹೆಜ್ಜೆಯನ್ನು ಇರಿಸಿತಾ? ಪ್ರಧಾನಿ ಅವರೇನೋ ಮಾರ್ಚ್ 21ರಂದು ಇಂದು ರಾತ್ರಿಯಿಂದ ಇಡೀ ಭಾರತ ಲಾಕ್‌ಡೌನ್ ಎಂದು ತರಾತುರಿಯಲ್ಲಿ ಘೋಷಣೆ ಮಾಡಿದ್ದನ್ನು ಬಿಟ್ಟರೆ ಅದಕ್ಕೆ ಪೂರಕವಾಗಿ ಯಾವುದೇ ಕಾರ್ಯಕ್ರಮವನ್ನು ರೂಪಿಸಲಿಲ್ಲ. ಪ್ರಧಾನಿಯ ದಿಢೀರ್‌ಘೋಷಣೆ ಬಡವರ, ಮಧ್ಯಮ ವರ್ಗದವರ ಅದರಲ್ಲೂ ವಿಶೇಷವಾಗಿ ವಲಸೆ ಕಾರ್ಮಿಕರ ಬದುಕಿನ ಅಡಿಪಾಯವನ್ನೇ ಅಲುಗಾಡಿಸಿತು.

ನಮ್ಮ ಆಧುನಿಕ ಭಾರತದ ಮಹಾನಗರಗಳನ್ನು ಕಟ್ಟಿದ, ಸಣ್ಣಪುಟ್ಟ ನಗರಗಳ ನಿರ್ಮಾಣದಲ್ಲಿ ಬೆವರು ಮತ್ತು ರಕ್ತ ಬಸಿದ ವಲಸೆ ಕಾರ್ಮಿಕರ ಬದುಕು ಈಗ ಮತ್ತಷ್ಟು ಮೂರಾಬಟ್ಟೆಯಾಗಿದೆ. ಇಡೀ ನಗರಗಳು ಬೀಗ ಜಡಿದುಕೊಂಡು ಕೂತಿದ್ದರಿಂದ ದುಡಿಮೆಯಿಲ್ಲದ, ಅನ್ನವಿಲ್ಲದ ಈ ಜನ ನಗರಗಳಿಂದ ಹೊರದಬ್ಬಲ್ಪಟ್ಟು ಮತ್ತೆ ತಮ್ಮ ಊರುಗಳಿಗೆ ಬರಿಗಾಲಲ್ಲಿ ಉರಿವ ಬಿಸಿಲಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಇವರು ಒಬ್ಬರು ಇಬ್ಬರಲ್ಲ, ಒಂದೇ ಊರಿನಿಂದಲ್ಲ, ದೇಶದ ಮೂಲೆ ಮೂಲೆಗಳಿಂದ ಹೆಗಲಲ್ಲಿ, ಬಗಲಲ್ಲಿ ಮಕ್ಕಳನ್ನು ಹೊತ್ತುಕೊಂಡು ಗಂಟುಮೂಟೆಗಳನ್ನು ತಲೆಯ ಮೇಲೆ ಹೇರಿಕೊಂಡು ಮಹಾಯಾನ ಆರಂಭಿಸಿದ್ದಾರೆ, ತಮ್ಮ ಊರು ನೂರು ಕಿಮೀ ಇರಲಿ, ಐದು ನೂರು ಕಿಮೀ ಇರಲಿ, ಸಾವಿರ ಕಿಮೀ ಇರಲಿ ನಡೆದು ಹೋಗುವುದನ್ನು ಬಿಟ್ಟರೆ ಇವರಿಗೆ ಬೇರೆ ದಾರಿಯಿಲ್ಲ. ಲಾಕ್‌ಡೌನ್ ಘೋಷಣೆ ಮಾಡುವವರಿಗೆ ಇದು ಅರ್ಥವಾಗುವುದಿಲ್ಲ.

ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರುವುದರಿಂದ ಉದ್ಯೋಗ ಬಯಸಿ ಮಹಾನಗರಗಳಿಗೆ ಬಂದಿದ್ದ ಈ ಸಾವಿರಾರು ಕಾರ್ಮಿಕರು ಒಟ್ಟೊಟ್ಟಿಗೆ ನಡೆದುಕೊಂಡು ಹೊರಟಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆತಂಕ ಉಂಟಾಗಿದೆ. ದಿಗ್ಬಂಧನ ಘೋಷಿಸಿದ ನಂತರ ತಾವಿರುವ ನಗರಗಳಲ್ಲಿ ರೈಲು, ಬಸ್ ನಿಲ್ದಾಣದ ಬಳಿ ಬಂದು ವಾಹನ ಬಿಡಬಹುದೇನೊ ಎಂದು ಕಾಯ್ದು ನಿರಾಶರಾಗಿ ಇವರು ಹೊರಟಿದ್ದಾರೆ. ಎಲ್ಲ ರಾಜ್ಯಗಳ ಗಡಿಗಳನ್ನು ಬಂದ್ ಮಾಡಿರುವುದರಿಂದ ಈ ವಲಸೆ ಕಾರ್ಮಿಕರು ಗಡಿಯಲ್ಲಿ ತಂಗಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಒಡಿಶಾ, ದಿಲ್ಲಿಗಳಲ್ಲಿ ಈ ಸಮಸ್ಯೆ ಉಲ್ಬಣಿಸಿದೆ. ಇಂಥವರ ಬಗ್ಗೆ ಸರಕಾರ ಎಷ್ಟು ಅಮಾನುಷವಾಗಿ ನಡೆದುಕೊಳ್ಳುತ್ತಿದೆ ಅಂದರೆ ಉತ್ತರ ಪ್ರದೇಶದಲ್ಲಿ ಬೇರೆ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರ ಮೇಲೆ ಯೋಗಿ ಆದಿತ್ಯನಾಥ್ ಸರಕಾರ ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸಿದೆ. ಇದರಿಂದ ಅನೇಕರು ಅಸ್ವಸ್ಥರಾಗಿದ್ದಾರೆ.

ಇಂಥ ವಲಸೆ ಕಾರ್ಮಿಕರು ವಲಸೆ ಹೋಗಲು ಅವಕಾಶ ಕೊಡದೆ ಅವರಿದ್ದ ನಗರಗಳಲ್ಲೇ ಊಟ ವಸತಿ ಸೌಕರ್ಯಗಳನ್ನು ಕಲ್ಪಿಸಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ. ಈ ಬಗ್ಗೆ ಸರಕಾರ ಕೈಗೊಂಡ ಕ್ರಮಗಳೇನು ಎಂಬುದನ್ನು ಬಹಿರಂಗಪಡಿಸಬೇಕು.
ವಲಸೆ ಕಾರ್ಮಿಕರ ಸಮಸ್ಯೆ ಮಾತ್ರವಲ್ಲ ಒಟ್ಟಾರೆ ಕೊರೋನ ವೈರಾಣು ಅನಾಹುತವನ್ನು ಎದುರಿಸಲು ಸರಕಾರ ಕೈಗೊಂಡ ನಿರ್ದಿಷ್ಟ ಕ್ರಮಗಳೇನು? ಕಾರ್ಮಿಕರಿಗೆ ಉದ್ಯೋಗವಿಲ್ಲ, ರೈತರ ಬೆಳೆ ಅನೇಕ ಕಡೆ ಹಾಳಾಗಿದೆ, ಅಸಂಘಟಿತ ವಲಯದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.ಇವರಿಗಾಗಿ ಸರಕಾರದ ಪರಿಹಾರ ಯೋಜನೆಗಳೇನು? ಬಹಿರಂಗಪಡಿಸಲಿ.

ಕೇಂದ್ರ ಸರಕಾರದಿಂದ ವಿಶೇಷವಾಗಿ ಪ್ರಧಾನಿ ಅವರಿಂದ ಅಂಥ ಯಾವುದೇ ಖಚಿತ ಕಾರ್ಯಕ್ರಮ ಪ್ರಕಟವಾಗಿಲ್ಲ. ಅದರ ಬದಲಾಗಿ ಈಗಿರುವ ಪ್ರಧಾನಮಂತ್ರಿ ವಿಪತ್ತು ಪರಿಹಾರ ನಿಧಿ ಇದ್ದರೂ ಪಿಎಂ ಕೇರ್ ಎಂಬ ಇನ್ನೊಂದು ಟ್ರಸ್ಟ್ ಖಾತೆಯನ್ನು ಆರಂಭಿಸಿ ಅದಕ್ಕೆ ದೇಶದ ಎಲ್ಲ ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯ 1 ಕೋಟಿ ರೂ. ಜಮೆ ಮಾಡಲು ಹೇಳಿದ್ದು ವಿನಾಕಾರಣ ಸಂದೇಹಕ್ಕೆ ಕಾರಣವಾಗಿದೆ. ಇನ್ನು ಮುಂದಾದರೂ ಕೇಂದ್ರ ಸರಕಾರ ದೇಶದಲ್ಲಿ ಕೊರೋನ ಪರಿಸ್ಥಿತಿ ಹೇಗಿದೆ, ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಎಂಬುದನ್ನು ರಾಷ್ಟ್ರದ ಜನರ ಎದುರು ಬಹಿರಂಗಪಡಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News