ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಎಸ್.ಆರ್.ಪಾಟೀಲ್

Update: 2020-04-01 15:23 GMT

ಬಾಗಲಕೋಟೆ, ಎ.1: ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಸಮೂಹ ಸಂಸ್ಥೆಗಳ ವತಿಯಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು 10 ಲಕ್ಷ ರೂ.ದೇಣಿಗೆ ನೀಡಿದ್ದಾರೆ. 

ಬುಧವಾರ ಬಾಗಲಕೋಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಿಲ್ಲಿಯ ನಿಝಾಮುದ್ದೀನ್ ಜಮಾತ್‍ಗೆ ಹೋದವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅಲ್ಲಿ ಪಾಲ್ಗೊಂಡವರಲ್ಲಿ ಸೋಂಕು ಮುನ್ನೂರರ ಗಡಿ ದಾಟಿದೆ ಎಂಬ ಮಾಹಿತಿ ಇದೆ. ಜನರು ಸಹ ಸ್ವಯಂಪ್ರೇರಿತವಾಗಿ ನಿರ್ಬಂಧ ಹಾಕಿಕೊಳ್ಳಬೇಕು. ಇಡೀ ಸಮುದಾಯಕ್ಕೆ ಹರಡುವ ಸಾಧ್ಯತೆಯಿದೆ. ಮೂರನೆ ಹಂತಕ್ಕೆ ಬಂದರೆ ಬಹಳ ತೊಂದರೆ ಆಗಲಿದೆ.

ಸರಕಾರ ಕೂಡ ಚುರುಕಾಗಿ ಕೆಲಸ ಮಾಡಬೇಕು. ನಿಝಾಮುದ್ದೀನ್ ಜಮಾತ್‍ನಲ್ಲಿ ಭಾಗವಹಿಸಿದ ಇನ್ನೂ ನಾಲ್ಕು ಸಾವಿರ ಜನರನ್ನು ಪತ್ತೆ ಮಾಡಬೇಕು. ಒಬ್ಬರನ್ನು ಬಿಡದೇ ಅವರನ್ನೆಲ್ಲಾ ಕ್ವಾರೆಂಟೈನ್ಸ್ ಗೆ ಒಳಪಡಿಸಬೇಕು. ಇದು ತ್ವರಿತವಾಗಿ ಕಾರ್ಯ ನಡೆಯಬೇಕು. ತಡವಾದಷ್ಟು ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News