ಎಲ್ಲ ಜಿಲ್ಲೆಗಳಲ್ಲಿ ಕೊರೋನ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ: ಸಚಿವ ಬಿ.ಶ್ರೀರಾಮುಲು

Update: 2020-04-01 18:09 GMT

ಬಾಗಲಕೋಟೆ, ಎ.1: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೊರೋನ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ತೆರೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದು, ಅದರಂತೆ ಕಾರ್ಯೋನ್ಮುಖವಾಗಿದ್ದೇವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನ ಸೋಂಕು ಪರೀಕ್ಷೆಗೆ ಬಾಗಲಕೋಟೆಯಲ್ಲಿ ವಿಶೇಷ ಲ್ಯಾಬ್ ಆರಂಭಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ಇಲ್ಲಿನ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಬುಧವಾರ ಬೆಳಗ್ಗೆವರೆಗೆ 101 ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 8 ಜನರು ಗುಣಮುಖರಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ ಎಂದರು.

ಇಲ್ಲಿಯವರೆಗೂ ಒಟ್ಟು 3,243 ಜನರ ಗಂಟಲು ದ್ರವ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ಅದರಲ್ಲಿ 3,025 ನೆಗೆಟಿವ್ ಬಂದಿದೆ. ಇನ್ನು 133 ವರದಿ ಬರಬೇಕಾಗಿದೆ. ರಾಜ್ಯದಲ್ಲಿ 33 ಸಾವಿರ ಜನರನ್ನು ಹೋ ಕ್ವಾರಂಟೇನ್‍ಗೆ ಒಳಪಡಿಸಲಾಗಿದೆ. ದಿಲ್ಲಿಯ ನಿಝಾಮುದ್ದೀನ್ ಪ್ರದೇಶದ ತಬ್ಲಿಗ್ ಜಮಾತ್ ಧಾರ್ಮಿಕ ಸಭೆಗೆ ಹೋದವರ ಬಗ್ಗೆ ಮಾಹಿತಿ ಕೊಡಲು ಸಾರ್ವಜನಿಕರಿಗೆ ಸಚಿವರು ಮನವಿ ಮಾಡಿದರು.

ವಿದೇಶದಿಂದ 16,550 ತ್ರಿ ಲೇಯರ್ ಮಾಸ್ಕ್, 2215 ಎನ್ 95 ಮಾಸ್ಕ್, 2030 ಪ್ರೊಟೆಕ್ಷನ್ ಕಿಟ್ ತರಿಸಲಾಗಿದೆ. ಆಯಾ ಜಿಲ್ಲೆಗಳ ಬೇಡಿಕೆಗೆ ಅನುಗುಣವಾಗಿ ಸಲಕರಣೆಗಳ ಪೂರೈಸಲಾಗುವುದು. ದೇಶದಲ್ಲಿ ಶೇ.80 ರಷ್ಟು ಜನರು ಲಾಕ್‍ಡೌನ್‍ಗೆ ಸಹಕರಿಸಿದ್ದಾರೆ. ಇನ್ನುಳಿದವರಿಗೆ ತಿಳುವಳಿಕೆ ಮೂಡಿಸಬೇಕಿದೆ. ಎಲ್ಲಿಯವರೆಗೆ ಜನರ ಸಹಕಾರ ಸಿಗುವುದಿಲ್ಲವೋ ಅಲ್ಲಿಯವರೆಗೆ ಕೊರೋನ ವೈರಸ್ ನಿಯಂತ್ರಣ ಕಷ್ಟ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News