ಮೌಲಾನ ಸಿರಾಜುಲ್ ಹಸನ್ ಸಾಹೇಬ್ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

Update: 2020-04-02 17:33 GMT

ಬೆಂಗಳೂರು: ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ಮಾಜಿ ಉಪಾಧ್ಯಕ್ಷ, ಜಮಾಅತೆ ಇಸ್ಲಾಮಿ ಹಿಂದ್‍ನ ಮಾಜಿ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಧಾರ್ಮಿಕ ವಿದ್ವಾಂಸ ಹಾಗು ಚಿಂತಕ ಮೌಲಾನ ಸಿರಾಜುಲ್ ಹಸನ್ ಸಾಹೇಬ್ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ  ಯಾಸಿರ್ ಹಸನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಮೌಲಾನ ಸಿರಾಜುಲ್ ಹಸನ್, ದೇಶದ ಉದ್ದಗಲಕ್ಕೂ ಸಂಚರಿಸಿ ವಿವಿಧ ಧರ್ಮೀಯರ ನಡುವೆ ಶಾಂತಿ, ಸಾಮರಸ್ಯ ಸೃಷ್ಟಿಸಲು ಅವಿರತವಾಗಿ ಶ್ರಮಿಸಿದ್ದರು. ಮುಸ್ಲಿಮೇತರ ಸಮುದಾಯಗಳ ಮಧ್ಯೆ ಇಸ್ಲಾಮಿನ ನೈಜ ಸಂದೇಶವನ್ನು ವ್ಯಾಪಕವಾಗಿ ಹರಡಲು ಅಪಾರವಾಗಿ ಶ್ರಮಿಸಿದ್ದರು. ಮೂಲತಃ ಕರ್ನಾಟದ ರಾಯಚೂರು ನಿವಾಸಿಯಾಗಿದ್ದ ಸಿರಾಜುಲ್ ಹಸನ್, 25 ವರ್ಷಗಳ ಕಾಲ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಪಾರ ಧಾರ್ಮಿಕ ಪಾಂಡಿತ್ಯ ಹೊಂದಿದ್ದ ಅವರು 12 ವರ್ಷಗಳ ಕಾಲ ರಾಷ್ಟ್ರಾಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು. ಸಮುದಾಯ ಸಬಲೀಕರಣಕ್ಕೆ ಮೌಲಾನಾ ಸಿರಾಜುಲ್ ಹಸನ್ ಸಾಹೇಬ್ ಅವರು ಸಲ್ಲಿಸಿರುವ ಸೇವೆಯು ಅವಿಸ್ಮರಣೀಯವಾದದ್ದು. ಸಾಮಾಜಿಕ ಕಳಕಳಿ ಹೊಂದಿದ್ದ ಅವರ ಜೀವನವು ಎಲ್ಲರಿಗೂ ಮಾದರಿಯುತವಾದುದು ಎಂದು ಯಾಸಿರ್ ಹಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News