ಸಾವಿನಿಂದ ಹಿಡಿದು ರೋಗದವರೆಗೆ ಎಲ್ಲದರಲ್ಲಿಯೂ ಬಿಜೆಪಿ ರಾಜಕೀಯ: ಸಿದ್ದರಾಮಯ್ಯ ಆರೋಪ

Update: 2020-04-02 18:22 GMT

ಬೆಂಗಳೂರು, ಎ.2: ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಸದುದ್ದೇಶದ, ರಚನಾತ್ಮಕ ಟೀಕೆಯನ್ನು ಸಹಿಸಿಕೊಳ್ಳಲಾಗದಷ್ಟು ಅಸಹಿಷ್ಣು ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಟೀಕೆ, ಅವರ ಉದ್ಧಟತನ ಮತ್ತು ಕೀಳುಮಟ್ಟದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಾವಿನಿಂದ ಹಿಡಿದು ರೋಗದವರೆಗೆ ಎಲ್ಲದರಲ್ಲಿಯೂ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಿರುವ ಬಿಜೆಪಿ ನಾಯಕರ ದುರಾಲೋಚನೆಯನ್ನು ಸಹಿಸಿಕೊಂಡರೆ ಜನತೆಗೆ ನಾವು ದ್ರೋಹ ಬಗೆದಂತಾಗುತ್ತದೆ. ನಾವು ಪ್ರಶ್ನೆ ಮಾಡುತ್ತೇವೆ, ನೀವು( ಜೆ.ಪಿ ನಡ್ಡಾ) ಉತ್ತರಿಸಬೇಕು ಎಂದು ಅವರು ತಿಳಿಸಿದ್ದಾರೆ.

"ದೇಶದ ಮೊದಲ ಕೊರೋನ ವೈರಸ್ ಪೀಡಿತ ವ್ಯಕ್ತಿ ಪತ್ತೆಯಾಗಿರುವುದು ಜನವರಿ 30ರಂದು. ಈ ಬಗ್ಗೆ ಎಚ್ಚರದಿಂದ ಇರಬೇಕು, ನಿರ್ಲಕ್ಷ್ಯ ಮಾಡಬಾರದೆಂದು ರಾಹುಲ್ ಗಾಂಧಿ ಟ್ವೀಟ್ ಮಾಡಿರುವುದು ಫೆಬ್ರವರಿ 12ರಂದು. ಇದರಲ್ಲಿ ಯಾವ ಕೀಳು ರಾಜಕೀಯ ಇತ್ತು ಜೆ.ಪಿ ನಡ್ಡಾ ಅವರೇ?"

"ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ ಆ ದೇಶದಲ್ಲಿ 80 ಜನರಿಗೆ ಕೊರೋನ ಸೋಂಕು ತಗಲಿತ್ತು. ಭಾರತದಲ್ಲಿ 20 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಹೀಗಿದ್ದರೂ ಗುಜರಾತ್ ನಲ್ಲಿ ಲಕ್ಷ ಲಕ್ಷ ಜನರನ್ನು ಸೇರಿಸಿ ಜಾತ್ರೆ ಮಾಡಿದವರು ಯಾರು? ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಮಾರ್ಚ್ 16ರ ವರೆಗೆ ಆರು ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳ ವಿಮಾನ ಪ್ರಯಾಣಿಕರನ್ನು ಪರೀಕ್ಷೆ ಮಾಡದೆ ದೇಶದೊಳಗೆ ಬಿಟ್ಟವರು ಯಾರು? ಹೀಗೆ ಬಂದಿದ್ದ ಎರಡು ಲಕ್ಷ ಪ್ರಯಾಣಿಕರಲ್ಲಿ ಪರೀಕ್ಷೆ ಗೊಳಗಾದವರು ಎಷ್ಟು ಮಂದಿ? ಇದು ನಿಮ್ಮ ಸಿದ್ಧತೆಯೇ? ಎಂದು ಪ್ರಶ್ನಿಸಿದ್ದಾರೆ.

"ಅಧಿವೇಶನ ಮುಂದೂಡುವಂತೆ ಕಾಂಗ್ರೆಸ್ ಒತ್ತಾಯಿಸಿದ ನಂತರವೂ ಲೋಕಸಭಾ ಅಧಿವೇಶನ ಮತ್ತು ಕರ್ನಾಟಕದಲ್ಲಿ ವಿಧಾನಸಭಾ ಅಧಿವೇಶನ ನಡೆಸಿದ್ದು ಯಾರು? ಜನತಾ ಕರ್ಫ್ಯೂ ಹೇರಿದ ನಂತರ ಲಾಕ್‌ಡೌನ್ ಆಗುವ ವರೆಗಿನ‌ ಮೂರು ದಿನಗಳ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ನಡೆಸಿ ಅಧಿಕಾರ ಹಿಡಿಯುವುದು ಕೊರೋನ ಎದುರಿಸುವ ಸಿದ್ಧತೆಗಿಂತಲೂ ಆದ್ಯತೆಯ ವಿಷಯವಾಗಿತ್ತೇ ಜೆ.ಪಿ ನಡ್ಡಾ ಅವರೇ?"

"ಜನತಾ ಕರ್ಫ್ಯೂ ಹೇರಿ ಚಪ್ಪಾಳೆ ತಟ್ಟಲು ಹೇಳಿ, ಜನ ಬೀದಿಗಿಳಿದು ಮೆರವಣಿಗೆ ಮಾಡುವಂತೆ ಮಾಡಿದ್ದು ಯಾರು? ಸಿಎಂ ಯಡಿಯೂರಪ್ಪ ಮದುವೆಗೆ ಹೋಗ್ತಾರೆ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗುಂಪುಕಟ್ಟಿಕೊಂಡು ದೇವಸ್ಥಾನಕ್ಕೆ ಹೋಗ್ತಾರೆ. ಇವರಿಗೆ ಲಾಕ್‌ಡೌನ್ ಇರಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ಜನರಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡದೆ, ದಿಡೀರನೇ ಲಾಕ್ ಡೌನ್ ಘೋಷಿಸಿ ಅರಾಜಕತೆಯನ್ನು ಸೃಷ್ಟಿಸಿದ್ದು ಯಾರು? ಬಡಜನತೆ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ಊರಿಗೆ ಹೊರಟು ಬೀದಿಪಾಲಾಗುವಂತೆ ಮಾಡಿದ್ದು ಯಾರು? ನಿಮ್ಮ ಪ್ರಧಾನಿ ಕೈಗೊಳ್ಳುವ ಅಡ್ಡಕಸುಬಿ ನಿರ್ಧಾರಗಳಿಂದ ಜನ ಬವಣೆ ಪಡುತ್ತಿರುವಾಗ ಮತ್ತು ಅದರಿಂದಾಗಿಯೇ ಕೊರೋನ ವೈರಸ್ ಸೋಂಕು ಉಲ್ಭಣಗೀಡಾಗುತ್ತಿರುವಾಗ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಸುಮ್ಮನಿರಬೇಕೆಂದು ನೀವು ಬಯಸುತ್ತೀರಾ?

ಕ್ಷಮಿಸಿ, ಜೆ.ಪಿ ನಡ್ಡಾ ಅವರೇ, ನಾವು ದೇಶದ ಜನತೆಗೆ ನಿಷ್ಠರಾಗಿರುವವರು, ಅವರ ಪರವಾಗಿ ದನಿ ಎತ್ತುವುದನ್ನು ನಿಲ್ಲಿಸುವುದಿಲ್ಲ. ನಿಮ್ಮ ಸಂಸ್ಕೃತಿಹೀನ, ಉದ್ಧಟತನದ ಟೀಕೆಗೆ ಬಗ್ಗುವುದಿಲ್ಲ. ನಾವು ಪ್ರಶ್ನೆ ಕೇಳುತ್ತೇವೆ, ನೀವು ಉತ್ತರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News