ಲಾಕ್‍ಡೌನ್: ಪಿಜಿ, ಹಾಸ್ಟೆಲ್‍ಗಳಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಊಟ: ರಾಜ್ಯ ಸರಕಾರ ಸುತ್ತೋಲೆ

Update: 2020-04-02 18:27 GMT

ಬೆಂಗಳೂರು, ಎ.2: ಲಾಕ್‍ಡೌನ್ ಪರಿಣಾಮದಿಂದ ಆಹಾರಕ್ಕಾಗಿ ಪರದಾಡುತ್ತಿರುವ ಪಿಜಿ, ಹಾಸ್ಟೆಲ್‍ಗಳಲ್ಲಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳ ನೆರವಿಗೆ ಆರೋಗ್ಯ ಇಲಾಖೆ ಧಾವಿಸಿದೆ. ಲಾಕ್‍ಡೌನ್ ಆದ ಒಂದು ವಾರದ ನಂತರ ನೆರವಿನ ಹಸ್ತ ಚಾಚಿದ್ದು ಜಿಲ್ಲಾಡಳಿತದ ಮೂಲಕ ಊಟೋಪಚಾರದ ವ್ಯವಸ್ಥೆ ಮಾಡುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರಿಗೆ ವ್ಯಾಸಂಗಕ್ಕೆ ಬರುವವರು, ಉದ್ಯೋಗ ಅರಸಿ ಬರುವವರು ಹಾಸ್ಟೆಲ್ ಹಾಗೂ ಪಿಜಿಗಳನ್ನೇ ಅವಲಂಬಿಸುತ್ತಾರೆ. ಹೀಗಾಗಿಯೇ ಮಹಾನಗರದಲ್ಲಿ ಹಲವಾರು ಪಿಜಿಗಳು ಹುಟ್ಟಿಕೊಂಡಿವೆ. ಕೋರಮಂಗಲ, ಹಲಸೂರು, ಎಲೆಕ್ಟ್ರಾನಿಕ್ ಸಿಟಿ, ಮಲ್ಲೇಶ್ವರಂ ಸೇರಿದಂತೆ ನಗರದ ಎಲ್ಲಾ ಭಾಗದಲ್ಲಿಯೂ ಲೆಕ್ಕವಿಲ್ಲದಷ್ಟು ಪ್ರಮಾಣದ ಪಿಜಿಗಳು ತಲೆ ಎತ್ತಿವೆ. ಯುಗಾದಿ ಹಬ್ಬ ಎನ್ನುವ ಕಾರಣಕ್ಕೆ ಅಲ್ಲಿರುವ ಕೆಲವರು ತಮ್ಮ ತಮ್ಮ ಊರಿಗೆ ಹೋಗಿದ್ದಾರೆ. ಆದರೆ ಬಹಳಷ್ಟು ಮಂದಿ ಇನ್ನೂ ಹಾಸ್ಟೆಲ್ ಹಾಗು ಪಿಜಿಗಳಲ್ಲೇ ಇದ್ದಾರೆ. ಪಿಜಿಯಲ್ಲಿ ಎರಡು ಬಗೆಯ ಆಯ್ಕೆ ಇದೆ, ವಿತ್ ಮೀಲ್ಸ್ ಹಾಗೂ ವಿತೌಟ್ ಮೀಲ್ಸ್. ಪಿಜಿಗಳಲ್ಲಿ ಊಟ ರುಚಿ ಇರುವುದಿಲ್ಲ ಎನ್ನುವ ಕಾರಣಕ್ಕೆ ಬಹುತೇಕರು ತಮ್ಮ ಕಚೇರಿ ಹಾಗು ಹೊಟೇಲ್‍ಗಳನ್ನೇ ಊಟ, ತಿಂಡಿಗಾಗಿ ಅವಲಂಬಿಸಿದ್ದಾರೆ.

ಈಗ ಲಾಕ್‍ಡೌನ್ ಪರಿಣಾಮ ನಗರದ ಎಲ್ಲಾ ಹೊಟೇಲ್, ಕ್ಯಾಂಟೀನ್‍ಗಳು ಮುಚ್ಚಿವೆ. ಪಾರ್ಸೆಲ್ ಕೊಡಬಹುದು ಎನ್ನುವ ನಿಯಮ ಇದ್ದರೂ ಹೊಟೇಲ್‍ಗಳೂ ಬಂದ್ ಆಗಿವೆ. ಇದರಿಂದಾಗಿ ಹೊಟೇಲ್ ಊಟವನ್ನೇ ನಂಬಿರುವ ಪಿಜಿ ವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿಶೇಷವಾಗಿ ಪಿಜಿಗಳಲ್ಲಿರುವ ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಸಮಸ್ಯೆ ಎದುರಾಗುತ್ತಿದೆ. ಊಟಕ್ಕಾಗಿ ಪ್ರಯಾಸ ಪಡಬೇಕಾಗಿದೆ. ಪಿಜಿಗಳಲ್ಲೇ ಇತರರೊಂದಿಗೆ ಹಂಚಿಕೊಂಡು ತಿನ್ನುವ ಸ್ಥಿತಿಗೆ ಸಿಲುಕಿದ್ದಾರೆ. ಹಾಸ್ಟೆಲ್ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ಕೆಲ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ಊರಿಗೆ ಮರಳಿದ್ದಾರೆ ಎನ್ನುವ ಕಾರಣ ಮುಂದಿಟ್ಟು ಇರುವ ಕೆಲ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ತಿಂಡಿ ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಕೂಡ ಆಹಾರಕ್ಕಾಗಿ ಅಲೆಯುವ ಸ್ಥಿತಿ ಎದುರಾಗಿದೆ.

ಇದು ಸಾಲದು ಎನ್ನುವಂತೆ ಲಾಕ್‍ಡೌನ್ ಕಾರಣ ಮುಂದೊಡ್ಡಿ ಹಾಸ್ಟೆಲ್ ಹಾಗೂ ಪಿಜಿ ತೆರವು ಮಾಡಿಸುವ ಪ್ರಯತ್ನಗಳು ಕೆಲವೆಡೆ ನಡೆಯುತ್ತಿವೆ. ಕಳೆದ ಒಂದು ವಾರದಿಂದ ಪೇಯಿಂಗ್ ಗೆಸ್ಟ್ ಮತ್ತು ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ಆಹಾರ ಸಮಸ್ಯೆಗೆ ಸಿಲುಕಿರುವ ಮಾಹಿತಿಯಿಂದ, ಕಡೆಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಇವರ ನೆರವಿಗೆ ಧಾವಿಸಿದೆ.

ಕೊರೋನ ವೈರಸ್ ಹರಡುವ ಕಾರಣದಿಂದ ವಿದ್ಯಾರ್ಥಿ ನಿಲಯಗಳಲ್ಲಿ, ಉದ್ಯೋಗಸ್ಥ ಮಹಿಳೆಯರ ವಸತಿ ಗೃಹಗಳಲ್ಲಿ ಹಾಗೂ ಪೇಯಿಂಗ್ ಗೆಸ್ಟ್ ಹೌಸ್‍ನಲ್ಲಿ ತಂಗಿರುವವರನ್ನು ತೆರವುಗೊಳಿಸದಂತೆ ನೋಡಿಕೊಳ್ಳಬೇಕು ಹಾಗೂ ಅವರಿಗೆಲ್ಲಾ ಹೆಚ್ಚಿನ ಶುಚಿತ್ವದೊಂದಿಗೆ ಊಟವನ್ನು ನೀಡಲು ರಾಜ್ಯದ ಎಲ್ಲಾ ಜಿಲ್ಲಾಡಳಿತಗಳು ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಪಿಜಿ, ಹಾಸ್ಟೆಲ್‍ಗಳಲ್ಲಿ ಇರುವವರಿಗೆ ಆಹಾರ ಪೂರೈಕೆ ಮಾಡುವ ಜವಾಬ್ದಾರಿಯನ್ನು ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಜಿಲ್ಲಾಡಳಿತವೇ ವಹಿಸಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News