ಅಸಂಘಟಿತ ವಲಯದ ಕಾರ್ಮಿಕರ ರಕ್ಷಣೆಗೆ ಧಾವಿಸಿ: ಪತ್ರದ ಮೂಲಕ ಸಿಎಂಗೆ ಸಿದ್ದರಾಮಯ್ಯ ಆಗ್ರಹ

Update: 2020-04-05 17:32 GMT

ಬೆಂಗಳೂರು, ಎ.5: ಗೃಹಾಧಾರಿತ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಜೀವನ್ಮರಣದ ಸಂಕಷ್ಟದಲ್ಲಿದ್ದು ಇದರಿಂದ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಹೀಗಾಗಿ ಅಸಂಘಟಿತ ವಲಯದ ಕಾರ್ಮಿಕರು ನಿತ್ಯದ ಆಹಾರಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದ್ದು, ರಾಜ್ಯ ಸರಕಾರ ಅವರ ರಕ್ಷಣೆಗೆ ತುರ್ತಾಗಿ ಧಾವಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರೈತ, ಕೂಲಿ ಕಾರ್ಮಿಕರಿಲ್ಲದೆ ಆರ್ಥಿಕತೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ವಲಯಗಳು ಸಂಕಷ್ಟದಲ್ಲಿರುವಾಗ ಅವರ ನೆರವಿಗೆ ನಾಗರಿಕರೆನಿಸಿಕೊಂಡ ಸರಕಾರಗಳು ಧಾವಿಸಬೇಕು. ಇವರಲ್ಲಿ ಮನೆಕೆಲಸದವರು, ಮಡಿವಾಳರು, ಸವಿತಾ ಸಮಾಜದವರು, ನೇಕಾರರು, ಸಿದ್ಧ ಉಡುಪು ಕೈಗಾರಿಕೆಗಳಲ್ಲಿನ ಕೆಲಸಗಾರರು, ಕಟ್ಟಡ ನಿರ್ಮಾಣಗಳ ಕಾರ್ಮಿಕರು, ಟ್ಯಾಕ್ಸಿ, ಟ್ರಕ್ ಚಾಲಕರು, ಹಮಾಲಿಗಳು, ಸಿನಿಮಾ ರಂಗದ ಹಾಗೂ ಕಿರುತೆರೆ ಕ್ಷೇತ್ರದ ಕಾರ್ಮಿಕರು, ಮೀನುಗಾರರು ಮುಂತಾದವರು ಇದ್ದಾರೆ.

ಈ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ಮಂದಿ ನನಗೆ ದೂರವಾಣಿ ಕರೆ ಮಾಡಿ ತಮಗೆ ಒದಗಿ ಬಂದಿರುವ ಸಂಕಷ್ಟವನ್ನು ವಿವರಿಸುತ್ತಿದ್ದಾರೆ. ಇವರುಗಳಿಗೆ ವಿಶೇಷ ಪ್ಯಾಕೇಜ್ ಅನ್ನು ನೀಡಬೇಕು. ಅಲ್ಲದೆ, ಸಂಬಂಧಿಸಿದ ಮಾಲಕರು ಲಾಕ್‍ಡೌನ್ ಅವಧಿಯ ವೇತನವನ್ನು ನೀಡುವಂತೆ ಸರಕಾರ ಮನವೊಲಿಸಬೇಕು. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡು ಹೆಚ್ಚು ಪ್ರಾಯೋಗಿಕವಾಗಿ, ವೈಜ್ಞಾನಿಕವಾಗಿ ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕು. ಆದುದರಿಂದ ಈ ಸಮಸ್ಯೆಯನ್ನು ಮಾನವೀಯವಾಗಿ ಪರಿಶೀಲಿಸಿ ಕಾರ್ಮಿಕರ ಬವಣೆಗಳನ್ನು ಪರಿಶೀಲಿಸಬೇಕೆಂದು ಸಿದ್ದರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News