ಬಾಗಲಕೋಟೆ: ಹೆಣ್ಣು ಮಕ್ಕಳ ಫೋಟೊ ದುರ್ಬಳಕೆ ಆರೋಪ; ಪ್ರಶ್ನಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿದ ಸವರ್ಣೀಯರು

Update: 2020-04-06 16:27 GMT

ಬಾಗಲಕೋಟೆ, ಎ.6: ದಲಿತರ ಕೇರಿಗೆ ನುಗ್ಗಿ ಸವರ್ಣೀಯರು ಮಹಿಳೆ, ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಇಲ್ಲಿನ ಸವರ್ಣೀಯ ಯುವಕರು ಟಿಕ್‍ಟಾಕ್‍ಗಳಲ್ಲಿ ದಲಿತ ಸಮುದಾಯದ ಯುವತಿಯರ ವಿಡಿಯೋ, ಫೋಟೋಗಳನ್ನು ಅವರ ಅನುಮತಿ ಇಲ್ಲದೇ ಸೆರೆ ಹಿಡಿದು, ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದ್ದು, ಇದನ್ನು ಗ್ರಾಮಸ್ಥರು ಸವರ್ಣೀಯ ಯುವಕರ ಜೊತೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡ ಸವರ್ಣೀಯ ಯುವಕರ ಗುಂಪೊಂದು ದಲಿತ ಕೇರಿಗೆ ನುಗ್ಗಿ ಮಕ್ಕಳು, ವೃದ್ಧರು, ಮಹಿಳೆಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೊಲೆ ಯತ್ನ ಸೇರಿ ಇನ್ನಿತರ ಸೆಕ್ಷನ್‍ಗಳ ಮೇಲೆ ಪ್ರಕರಣ ದಾಖಲಿಸಿ ಬಾಗಲಕೋಟೆ ಸೆಷನ್ಸ್ ಕೋರ್ಟ್‍ಗೆ ಎಫ್‍ಐಆರ್ ವರದಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News