ಕೆರೆಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ಮೃತ್ಯು

Update: 2020-04-09 12:34 GMT

ರಾಯಚೂರು, ಎ.9: ಜಾನುವಾರುಗಳಿಗೆ ಕುಡಿಯಲು ನೀರು ತರಲು ಹೋದ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ.

ನಾಗರಾಜ್(10), ಕಾರ್ತಿಕ್(8) ಹಾಗೂ ರವಿಕುಮಾರ್(7) ಮೃತ ಬಾಲಕರು. ಮೃತ ಬಾಲಕರು ಒಂದೇ ಕುಟುಂಬದವರಾಗಿದ್ದು, ಗುರುವಾರ ಬೆಳಗ್ಗೆ ಜಾನುವಾರುಗಳಿಗಾಗಿ ನೀರು ತರಲು ಗ್ರಾಮದ ಹೊರವಲಯದ ಕೆರೆಗೆ ಹೋಗಿದ್ದಾರೆ.

ಈ ವೇಳೆ ಒಬ್ಬ ಬಾಲಕ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ಮತ್ತೊಬ್ಬ ಬಾಲಕ ಆತನನ್ನು ಕಾಪಾಡಲು ಹೋಗಿ ಆತನೂ ಕೆರೆಯಲ್ಲಿ ಮುಳುಗಿದ್ದಾನೆ. ಈ ರೀತಿ ಒಬ್ಬರನ್ನ ಕಾಪಾಡಲು ಒಬ್ಬರು ಹೋಗಿ ಮೂವರೂ ನೀರು ಪಾಲಾಗಿದ್ದಾರೆ. ಸ್ಥಳೀಯರು ಕೆರೆಯ ಬಳಿ ಹೋಗಿ ನೋಡಿದಾಗ ಬಾಲಕರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. 

ಮಾಹಿತಿ ತಿಳಿದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News