ಕುಶಾಲನಗರ: ಕಾಡಿಗೆ ತೆರಳಿದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ

Update: 2020-04-11 15:54 GMT

ಮಡಿಕೇರಿ, ಎ.11: ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕುಶಾಲನಗರದ ರಂಗಸಮುದ್ರದ ಬಳಿ ನಡೆದಿದೆ. 

ಕಬ್ಬಿನಗದ್ದೆ ಗಿರಿಜನ ಹಾಡಿಯ ಲೋಕೇಶ್ (38) ಎಂಬುವವರೇ ಮೃತ ವ್ಯಕ್ತಿ. ತಾವು ಸಾಕಿದ ಹಸು ಕಾಡಿನಲ್ಲಿ ಕರುವಿಗೆ ಜನ್ಮ ನೀಡಿದೆ ಎನ್ನುವ ವಿಷಯ ತಿಳಿದು ಹಾಡಿಯ ಕೆಲವು ನಿವಾಸಿಗಳೊಂದಿಗೆ ಅಲ್ಲಿಗೆ ತೆರಳಿದಾಗ ಈ ಘಟನೆ ನಡೆದಿದೆ.

ದಾರಿ ಮಧ್ಯೆ ಸಿಕ್ಕ ಸುಮಾರು ಎಂಟು ಕಾಡಾನೆ ಹಿಂಡಿನಲ್ಲಿದ್ದ ಒಂದು ಆನೆ ಏಕಾಏಕಿ ದಾಳಿ ಮಾಡಿ ಲೋಕೇಶ್ ಅವರ ಎದೆಯ ಭಾಗವನ್ನು ತುಳಿದು ಗಾಯಗೊಳಿಸಿದೆ. ಜೊತೆಯಲ್ಲಿದ್ದ ಮುತ್ತ ಎಂಬುವವರು ಕೂದಲೆಳೆ ಅಂತರದಿಂದ ಪಾರಾಗಿದ್ದು, ಗಾಯಾಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಲೋಕೇಶ್ ಅವರನ್ನು ಕುಶಾಲನಗರ ಆಸ್ಪತ್ರೆಗೆ ಕರೆತರಲಾಯಿತಾದರೂ ಪ್ರಾಣ ಉಳಿಯಲಿಲ್ಲ. ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಮೃತ ಲೋಕೇಶನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News