×
Ad

46 ಮಂದಿ ವಲಸೆ ಕಾರ್ಮಿಕರಿಗೆ ಆಶ್ರಯ ಕಲ್ಪಿಸಿದ ಬೀದರ್ ಜಿಲ್ಲಾಡಳಿತ

Update: 2020-04-11 21:44 IST
ಸಾಂದರ್ಭಿಕ ಚಿತ್ರ

ಬೀದರ್, ಎ.11: ಕೊರೋನ ವೈರಸ್ ತಡೆಗಟ್ಟಲು ಲಾಕ್‍ಡೌನ್ ಜಾರಿಯಾದ ಬೆನ್ನಲ್ಲೇ ರಾಜ್ಯದ ಗಡಿಗಳು ಬಂದ್ ಆಗಿ ತಮಿಳುನಾಡು, ಮಧ್ಯಪ್ರದೇಶ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕ ಕಾರ್ಮಿಕರು ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದು, ಎಲ್ಲಿಯೂ ಊಟ ಸಿಗದೆ ತಮ್ಮೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ 46 ಕಾರ್ಮಿಕರಿಗೆ ಬೀದರ್ ಜಿಲ್ಲಾಡಳಿತ ನಗರದಲ್ಲಿ ಆಶ್ರಯ ಒದಗಿಸಿದೆ.

ಮಹಾರಾಷ್ಟ್ರದಲ್ಲಿ ನಿರ್ಬಂಧ ಜಾರಿಗೊಳಿಸಿದ ಬಳಿಕ ಕೆಲವು ಕಾರ್ಮಿಕರು ಪ್ರಯಾಸಪಟ್ಟು ಹುಮನಾಬಾದ್‍ವರೆಗೆ ಬಂದಿದ್ದರು. ಬೀದರ್ ಗೆ ಬಂದಾಗ ಕೇಂದ್ರ ಸರಕಾರ ಲಾಕ್‍ಡೌನ್ ಘೋಷಣೆ ಮಾಡಿತ್ತು. ಜಿಲ್ಲಾ ಆಡಳಿತ ಇವರನ್ನು ಎರಡು ದಿನ ಸಮುದಾಯ ಭವನದಲ್ಲಿ ಇರಿಸಿ ಇದೀಗ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದೆ. ಇವರಿಗೆ ತಮಿಳು ಬಿಟ್ಟರೆ ಯಾವ ಭಾಷೆಯೂ ಬರುವುದಿಲ್ಲ. ಹೀಗಾಗಿ, ಇವರು ಸಂಜ್ಞೆಯ ಮೂಲಕವೇ ಸಂವಹನ ನಡೆಸಿದ್ದಾರೆ.

ಹೈದರಾಬಾದ್‍ನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಒಟ್ಟು 18 ಜನರನ್ನು ವಸತಿ ನಿಲಯದಲ್ಲಿ ಇರಿಸಲಾಗಿತ್ತು. ಇಬ್ಬರು ಮಾತ್ರ ತಮ್ಮೂರಿನ ಒಂದು ಲಾರಿಯಲ್ಲಿ ತೆರಳಿದ್ದಾರೆ. 16 ಜನ ಕಟ್ಟಡ ಕಾರ್ಮಿಕರು ಇಲ್ಲಿಯೇ ವಾಸವಾಗಿದ್ದಾರೆ. ಇವರೆಲ್ಲರೂ ಯಾವಾಗ ಲಾಕ್‍ಡೌನ್ ಆದೇಶ ತೆರವುಗೊಳ್ಳಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ಹಾಗೂ ಕೋಲಾರ ಜಿಲ್ಲೆಯ ಇಬ್ಬರು ಭಾಲ್ಕಿ ಗಡಿಯಿಂದ ನಡೆದುಕೊಂಡು ಬರುತ್ತಿದ್ದಾಗ ಪೋಲಿಸರು ಅವರನ್ನು ತಡೆದು ವಸತಿನಿಲಯದಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರದ 10 ಯುವಕರು ಲಾಕ್‍ಡೌನ್ ಆಗುವ ಮೊದಲೇ ಅನುಮತಿ ಪಡೆದು ಊರಿಗೆ ಹೊರಡಲು ಸಜ್ಜಾಗಿದ್ದರು. ಅಷ್ಟರಲ್ಲಿ ಮಹಾರಾಷ್ಟ್ರದಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಲ್ಲಿಂದ ರೈಲು ಮಾರ್ಗದಲ್ಲಿ ನಡೆದುಕೊಂಡು ಕಮಲನಗರದವರೆಗೂ ಬಂದಿದ್ದರು. ಅಷ್ಟೊತ್ತಿಗೆ ಇಡೀ ರಾಷ್ಟ್ರವೇ ಲಾಕ್‍ಡೌನ್ ಆಗಿತ್ತು.

ಗುರುದ್ವಾರದ ಪ್ರಬಂಧಕ ಕಮಿಟಿ ಎಲ್ಲ 46 ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದೆ. ಇಂದಿರಾ ಕ್ಯಾಂಟೀನ್‍ನಿಂದ ಬೆಳಗ್ಗೆ ಉಪಾಹಾರ ಕೊಡಲಾಗುತ್ತಿದೆ. ವಸತಿ ನಿಲಯದಿಂದ ಎಲ್ಲರಿಗೂ ಸಾಬೂನು, ಟೂತ್ ಪೇಸ್ಟ್ ಹಾಗೂ ಬ್ರಶ್ ಕೊಡಲಾಗಿದೆ ಎಂದು ವಸತಿ ನಿಲಯದ ವಾರ್ಡನ್ ಬಲಭೀಮ ತಿಳಿಸಿದರು.

ಬೀದರ್ ಜಿಲ್ಲಾಡಳಿತವು ಸಂಕಷ್ಟದಲ್ಲಿದ್ದ ನಮ್ಮೆಲ್ಲರ ನೆರವಿಗೆ ಬಂದಿದೆ. ಬೆಳಗ್ಗೆ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯ ಪೋಲಿಸರು ಮಾನವೀಯತೆಯಿಂದ ನಡೆದುಕೊಂಡಿದ್ದಾರೆ. ಕರ್ನಾಟಕ ಸರಕಾರಕ್ಕೆ ಋಣಿಯಾಗಿದ್ದೇವೆ ಎಂದು ಮಧ್ಯಪ್ರದೇಶದ ಕಾರ್ಮಿಕರು ಕೃತಜ್ಞತೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News