ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲು
Update: 2020-04-17 15:22 GMT
ಬಳ್ಳಾರಿ, ಎ.17: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.
ಸೋವೇನಹಳ್ಳಿಯ ಮಲ್ಲನಕೇರಿ ಸುರೇಶ, ಕೋಗಳಿ ಮಾರುತಿ, ಹಂಪಸಾಗರದ ಪಿ.ಫಕ್ರುದ್ದೀನ್ ನೀರುಪಾಲಾದವರು. ಒಟ್ಟು ಐವರು ಸ್ನೇಹಿತರು ನದಿಗೆ ಈಜಲು ತೆರಳಿದ್ದು, ಈ ಸಂದರ್ಭ ಮೂವರು ನೀರಿನಲ್ಲಿ ಕೊಚ್ಚಿಹೋಗಿದ್ದು, ಇನ್ನಿಬ್ಬರು ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ.
ಇವರು ಪ್ರತಿದಿನವೂ ನದಿಗೆ ಸ್ನಾನಕ್ಕೆ ಹೋಗುತ್ತಿದ್ದರು. ಆದರೆ ಇಂದು ಆಳವಾದ ಗುಂಡಿಗಳಿರುವ ಸ್ಥಳಕ್ಕೆ ತೆರಳಿದ್ದು, ಈಜಲಾಗದೇ ಮೂವರು ನೀರು ಪಾಲಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮೀನುಗಾರರು ನದಿಯಲ್ಲಿ ಹುಡುಕಾಡುತ್ತಿದ್ದು, ನೀರುಪಾಲಾದ ಮೂವರು ಯುವಕರು ಸಂಜೆಯಾದರೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.