ಅತ್ಯವಶ್ಯಕ ಔಷಧಗಳ ಕೊರತೆ ಇಲ್ಲ: ಡಿ.ವಿ.ಸದಾನಂದಗೌಡ

Update: 2020-04-17 16:40 GMT

ಹೊಸದಿಲ್ಲಿ, ಎ.17: ಪ್ಯಾರಾಸಿಟಮಾಲ್, ಅಜಿತ್ರೋಮೈಸಿನ್, ಹೈಡ್ರೋಕ್ಸಿಕ್ಲೋರೋಕ್ವಿನ್ ಸೇರಿದಂತೆ ಎಲ್ಲ ಅತ್ಯವಶ್ಯಕ ಔಷಧಗಳು ಹಾಗೂ ಅವನ್ನು ತಯಾರಿಸಲು ಬೇಕಾಗುವ ಮೂಲ ರಾಸಾಯನಿಕಗಳು(ಎಪಿಐ) ಮುಂದಿನ ಹಲವು ತಿಂಗಳ ತನಕ ಸಾಕಾಗುವಷ್ಟು ದಾಸ್ತಾನು ಇದೆ. ಔಷಧಗಳ ಸಾಗಣೆ, ಸರಬರಾಜು ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಜೊತೆ ಸೇರಿ ಹಲವು ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಜನೌಷಧಿ ಕೇಂದ್ರಗಳ ಔಷಧಿ ಸರಬರಾಜು ವ್ಯವಸ್ಥೆ ಕೂಡ ಸಹಜ ಸ್ಥಿತಿಗೆ ಮರಳುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಹುತೇಕ ಕೊರಿಯರ್ ಸೇವೆಗಳು ಬಂದಾಗಿದ್ದರಿಂದ, ಔಷಧ ಸಾಗಣೆಯಲ್ಲಿ ವ್ಯತ್ಯಾಸವಾಗಿತ್ತು. ವಿಶೇಷವಾಗಿ ಒಳನಾಡಿನಲ್ಲಿರುವ ಜನೌಷಧಿ ಕೇಂದ್ರಗಳಿಗೆ ತೊಂದರೆಯಾಗಿತ್ತು. ಈಗ ಬೇಡಿಕೆಯನ್ನು ಪೂಲಿಂಗ್ ವ್ಯವಸ್ಥೆ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಮೀಪವಿರುವ ನಾಲ್ಕಾರು ಡೀಲರುಗಳಿಗೆ ಒಟ್ಟಿಗೆ ಒಂದೊಂದೆ ವಾಹನಗಳಲ್ಲಿ ಔಷಧ ಪೂರೈಸಲಾಗುತ್ತಿದೆ. ಚೆನ್ನೈ, ದಿಲ್ಲಿ ಸಮೀಪದ ಗುರುಗ್ರಾಮ ಹಾಗೂ ಗುವಾಹಟಿಗಳಲ್ಲಿರುವ ಗೋದಾಮುಗಳಿಂದ ವಿಶೇಷ ಸರಕು ವಾಹನಗಳಲ್ಲಿ ಸರಬರಾಜು ಚುರುಕುಗೊಳಿಸಲಾಗಿದೆ. ಕೆಲವನ್ನು ನೇರವಾಗಿ ಔಷಧ ಕಾರ್ಖಾನೆಗಳಿಂದಲೆ ಅಗತ್ಯವಿರುವೆಡೆ ಕಳುಹಿಸಲಾಗುತ್ತಿದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.

ಸಾಗಣೆ ಹಾಗೂ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಕಚೇರಿಯಲ್ಲಿ ಉನ್ನತಾಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಹಾಗೆಯೆ ಸಹಾಯವಾಣಿ 011-23389840 ಅನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹೈಡ್ರೋಕ್ಸಿಕ್ಲೋರೋಕ್ವಿನ್ ದಾಸ್ತಾನಿದೆ
ನಮಗೆ ಪ್ರತಿ ತಿಂಗಳು ಸರಾಸರಿ 95 ಲಕ್ಷ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಬೇಕು. ನಮ್ಮಲ್ಲಿ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಇದೆ. ಹಾಗೆಯೆ ಇದರ ಉತ್ಪಾದನೆ ನಿರಂತರವಾಗಿದೆ. ಮುಖ್ಯ ಆಂಟಿಬಯೋಟಿಕ್ ಔಷಧಗಳಲ್ಲಿ ಒಂದಾದ ಅಜಿತ್ರೋಮೈಸಿನ್ ನಮಗೆ ವಾರ್ಷಿಕವಾಗಿ 2.2 ಕೋಟಿ ಮಾತ್ರೆ ಬೇಕು. ನಾವು 9.6 ಕೋಟಿ ಅಜಿತ್ರೊಮೈಸಿನ್ ಮಾತ್ರೆಯನ್ನು ಉತ್ಪಾದಿಸುತ್ತಿದ್ದೇವೆ. ಜ್ವರ ಮುಂತಾದ ಸಣ್ಣಪುಟ್ಟ ಕಾಯಿಲೆಗಳಿಗೆ ಬಳಸುವ ಪ್ಯಾರಾಸಿಟಮಾಲ್ ಮಾತ್ರೆ 482 ಕೋಟಿಗಿಂತ ಹೆಚ್ಚು ಸಂಗ್ರಹವಿದೆ. ಆಂತರಿಕ ಬೇಡಿಕೆಯನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆ. ಮಿಕ್ಕಿದ್ದನ್ನು ಮಾತ್ರ ರಫ್ತು ಮಾಡುತ್ತಿದ್ದೇವೆ. ಹಾಗಾಗಿ ಯಾವುದೆ ರೀತಿಯ ಆತಂಕಕ್ಕೆ ಆಸ್ಪದವಿಲ್ಲ ಎಂದು ಎಂದು ಸದಾನಂದಗೌಡ ಮಾಹಿತಿ ನೀಡಿದ್ದಾರೆ.

ರಸಗೊಬ್ಬರವಿದೆ, ಆತಂಕ ಬೇಡ
ದೇಶದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನು ಇದೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಮುಂಗಾರು ಬಿತ್ತನೆಗೆ ಬೇಕಾಗುವಷ್ಟು ರಸಗೊಬ್ಬರವನ್ನು ಈಗಾಗಲೆ ದಾಸ್ತಾನು ಮಾಡಲಾಗಿದೆ. ಹಾಗಾಗಿ ರೈತರು ಆತಂಕಪಡಬೇಕಿಲ್ಲ. ರಸಗೊಬ್ಬರವನ್ನು ಈಗ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ. ಅದನ್ನು ಅಕ್ರಮ ದಾಸ್ತಾನು, ಕಾಳಸಂತೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಸದಾನಂದ ಗೌಡ ತಿಳಿಸಿದ್ದಾರೆ.

ದೇಶದಲ್ಲಿ ಸದ್ಯ 61.05 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಸಂಗ್ರಹವಿದೆ. ಫೋಸ್ಪೇಟ್ ಮತ್ತು ಫೋಟಾಷ್ ಮತ್ತಿತರ ಮಾದರಿಯ ರಸಗೊಬ್ಬರ 86.24 ಲಕ್ಷ ಟನ್ ದಾಸ್ತಾನಿದೆ. ಇದರ ಹೊರತಾಗಿ 7.47 ಲಕ್ಷ ಟನ್ ರಸಗೊಬ್ಬರ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ 5.6 ಲಕ್ಷ ಟನ್ ಸರಕು ಈ ತಿಂಗಳ ಕೊನೆ ಹಾಗೂ ಮೇ ಮೊದಲ ವಾರದಲ್ಲಿ ವಿವಿಧ ಬಂದರುಗಳನ್ನು ತಲುಪಲಿವೆ ಎಂದು ಅವರು ಹೇಳಿದ್ದಾರೆ.

ಲಾಕ್‍ಡೌನ್ ಮಧ್ಯೆಯೂ ಅಗತ್ಯವಿದ್ದೆಡೆ ಸಾಗಣೆಗೆ ವ್ಯವಸ್ಥೆ ಮಾಡಲಾಗಿದೆ. ಲಾಕ್‍ಡೌನ್ ಆರಂಭದಲ್ಲಿ ವ್ಯಾಗನ್ ಹಾಗೂ ಕೆಲಸಗಾರರ ಕೊರತೆ ಉಂಟಾಗಿತ್ತು. ಸತತ ಪ್ರಯತ್ನದ ಮೂಲಕ ಈಗ ಅವನ್ನೆಲ್ಲ ನಿವಾರಿಸಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಎ.14ರವರೆಗೆ 584 ರೇಕುಗಳಷ್ಟು(ಸುಮಾರು 12.8 ಲಕ್ಷ ಟನ್) ರಸಗೊಬ್ಬರವನ್ನು ವಿವಿಧ ಕಾರ್ಖಾನೆಗಳು ಹಾಗೂ ಗೋದಾಮುಗಳಿಂದ ದೇಶದ ಬೇರೆ ಬೇರೆ ಭಾಗಗಳಿಗೆ ಸಾಗಾಟ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಾಗೆಯೆ, ಕಾರ್ಖಾನೆಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಸಾಗಣೆ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ ಎಂದು ಸದಾನಂದಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News