ಏನಿದು 'ಹೆಲಿಕಾಪ್ಟರ್ ಮನಿ' ಮತ್ತು ಈಗೇಕೆ ಇದು ಸುದ್ದಿಯಲ್ಲಿದೆ?

Update: 2020-04-17 17:40 GMT

ಕೊರೋನ ವೈರಸ್‌ನಿಂದ ವಿಶ್ವದ ಆರ್ಥಿಕತೆಗಳೆಲ್ಲ ತಳ ಕಚ್ಚಿದ್ದು, ಸದ್ಯೋಭವಿಷ್ಯದಲ್ಲಿ ಈ ಬಿಕ್ಕಟ್ಟಿನಿಂದ ಪಾರಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ದುಃಸ್ವಪ್ನವನ್ನು ನಿಭಾಯಿಸಲು, ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ವಿವಿಧ ದೇಶಗಳ ಅಧಿಕಾರಿಗಳು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ.

ಸದ್ಯ ಸುದ್ದಿಯಲ್ಲಿರುವ ಕಾರ್ಯತಂತ್ರವೆಂದರೆ ‘ಹೆಲಿಕಾಪ್ಟರ್ ಮನಿ’. ಇದನ್ನು ಸರಳವಾಗಿ ಹೆಲಿಕಾಪ್ಟರ್ ಮೂಲಕ ಹಣ ಉದುರಿಸುವುದು ಎಂದುಕೊಳ್ಳಬಹುದು. ಆದರೆ ವಾಸ್ತವದಲ್ಲಿ ಹಾಗಲ್ಲ, ನಮ್ಮ ರಿಸರ್ವ್ ಬ್ಯಾಂಕಿನಂತಹ ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್ ಭರ್ಜರಿ ಹಣವನ್ನು ಅಂದರೆ ನೋಟುಗಳನ್ನು ಮುದ್ರಿಸಿ ಸರಕಾರಕ್ಕೆ ನೀಡುವುದು ಇದರ ಪ್ರಾಥಮಿಕ ಅರ್ಥ. ಸರಕಾರವು ರಾಜ್ಯಸರಕಾರಗಳ ಮೂಲಕ ಈ ಹಣವನ್ನು ಜನರ ಕೈಗೆ ಸಿಗುವಂತೆ ಮಾಡುತ್ತದೆ. ಸರಳವಾಗಿ ಹೇಳಬೇಕೆಂದರೆ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಾಗ ಸರಕಾರವು ಹಣದ ಹರಿಯುವಿಕೆಯನ್ನು ಹೆಚ್ಚಿಸಲು ಹೆಚ್ಚಿನ ಹಣವನ್ನು ಮುದ್ರಿಸಿ ಜನರಿಗೆ ಆರ್ಥಿಕ ನೆರವಿನ ರೂಪದಲ್ಲಿ ನೀಡಿ ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು ಈ ‘ಹೆಲಿಕಾಪ್ಟರ್ ಮನಿ’ ನೀತಿ ಎನ್ನಬಹುದು. ಈ ಹಣವನ್ನು ಸರಕಾರವು ಆರ್‌ಬಿಐಗೆ ವಾಪಸ್ ಮಾಡಬೇಕಿಲ್ಲ, ಜನರೂ ಸರಕಾರಕ್ಕೆ ವಾಪಸ್ ಮಾಡಬೇಕಿಲ್ಲ. ಹೀಗೆ ಹೆಚ್ಚುವರಿ ಹಣವು ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕುಸಿಯುತ್ತಿರುವ ಆರ್ಥಿಕತೆಯನ್ನು ಉತ್ತೇಜಿಸಿ ಅದಕ್ಕೆ ಬಲ ತುಂಬುತ್ತದೆ ಎನ್ನುವುದು ಇದರ ಹಿಂದಿರುವ ಪರಿಕಲ್ಪನೆ.
ಈಗ ಸುದ್ದಿಯಲ್ಲಿರುವ ‘ಹೆಲಿಕಾಪ್ಟರ್ ಮನಿ ’ ಕುರಿತು ಜನರಲ್ಲಿ ಪ್ರಶ್ನೆಗಳೆದ್ದಿವೆ. ಇವುಗಳಿಗೆ ಉತ್ತರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಏನಿದು ‘ಹೆಲಿಕಾಪ್ಟರ್ ಮನಿ’ ?
ಇದು ಕುಸಿಯುತ್ತಿರುವ ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ಉದ್ದೇಶದ ಅಸಾಂಪ್ರದಾಯಿಕ ಹಣಕಾಸು ನೀತಿ ಸಾಧನವಾಗಿದೆ. ಭಾರೀ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಿ ಅವುಗಳನ್ನು ಸಾರ್ವಜನಿಕರಿಗೆ ಹಂಚುವ ಕಾರ್ಯತಂತ್ರವನ್ನು ಇದು ಒಳಗೊಂಡಿದೆ. ಅಮೆರಿಕದ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೈಡ್‌ಮನ್ ಅವರು ಮೊದಲ ಬಾರಿಗೆ ಈ ಶಬ್ದವನ್ನು ಹುಟ್ಟು ಹಾಕಿದ್ದರು. ಕುಸಿದ ಆರ್ಥಿಕತೆಯನ್ನು ಮೇಲಕ್ಕೆತ್ತಲು ಅನಿರೀಕ್ಷಿತವಾಗಿ ಆಕಾಶದಿಂದ ಹಣ ಉದುರುವಂತೆ ಅದರ ಮೇಲೆ ದುಡ್ಡಿನ ಮಳೆಯನ್ನು ಸುರಿಯುವುದಕ್ಕೆ ಒತ್ತು ನೀಡಲು ಫ್ರೈಡ್‌ಮನ್ ಈ ಶಬ್ದವನ್ನು ಬಳಸಿದ್ದರು. ಇಂತಹ ನೀತಿಯಡಿ ಸೆಂಟ್ರಲ್ ಬ್ಯಾಂಕ್ ಬೇಡಿಕೆಯನ್ನು ಮತ್ತು ಹಣದುಬ್ಬರವನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರದ ಮೂಲಕ ಹಣದ ಪೂರೈಕೆಯನ್ನು ನೇರವಾಗಿ ಹೆಚ್ಚಿಸುತ್ತದೆ ಮತ್ತು ಈ ಹೊಸ ಹಣವನ್ನು ಜನರಿಗೆ ಹಂಚುತ್ತದೆ.

‘ಹೆಲಿಕಾಪ್ಟರ್ ಮನಿ’ ಈಗೇಕೆ ಸುದ್ದಿಯಲ್ಲಿದೆ?

ಕೊರೋನ ವೈರಸ್‌ನ ಹೊಡೆತಕ್ಕೆ ನಲುಗಿರುವ ಆರ್ಥಿಕತೆ ದಿನೇದಿನೇ ಪ್ರಪಾತಕ್ಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರು ಸರಕಾರಗಳು ಈ ಆಪತ್ತಿನಿಂದ ಪಾರಾಗಲು ಹೆಲಿಕಾಪ್ಟರ್ ಮನಿ ನೆರವಾಗಬಲ್ಲದು ಎಂಬ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಕ್ವಾಂಟಿಟೇಟಿವ್ ಈಸಿಂಗ್ (ಕ್ಯೂಇ) ಅಥವಾ ಪರಿಮಾಣಾತ್ಮಕವಾಗಿ ಸಡಿಲಿಕೆಯ ಮೂಲಕ ಜಿಡಿಪಿಯಿಂದ ಶೇ.5ರಷ್ಟು ಹಣಕಾಸನ್ನು ಬಿಡುಗಡೆ ಮಾಡುವಂತೆ ಅವರು ಸೂಚಿಸಿದ್ದಾರೆ. ವಿಶ್ವಾದ್ಯಂತ ಅನುಸರಿಸಲಾಗುತ್ತಿರುವ ಕ್ಯೂಇ ನೀತಿಯು ಪರಿಸ್ಥಿತಿಯನ್ನು ನಿಭಾಯಿಸಲು ಏಕೈಕ ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ‘ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ನಮಗೆ ವ್ಯೆಹಾತ್ಮಕ ಆರ್ಥಿಕ ನೀತಿಯೊಂದು ಅಗತ್ಯವಾಗಿದೆ. ಆರ್‌ಬಿಐ ಕ್ಯೂಇ ನೀತಿಯನ್ನು ಅನುಷ್ಠಾನಿಸಬೇಕು. ಇದನ್ನು ‘ಹೆಲಿಕಾಪ್ಟರ್ ಮನಿ’ಎನ್ನಲಾಗುತ್ತದೆ. ಇದು ಸರಕಾರಗಳು ಮತ್ತು ಹಣಕಾಸು ಸಂಸ್ಥೆಗಳು ಹಣಕಾಸನ್ನು ಕ್ರೋಡೀಕರಿಸಲು ನೆರವಾಗುತ್ತದೆ ಮತ್ತು ನಾವು ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ಬರಲು ಸಾಧ್ಯವಾಗುತ್ತದೆ. ಕ್ಯೂಇ ಮೂಲಕ ಜಿಡಿಪಿಯಿಂದ ಶೇ.5ರಷ್ಟು ಮೊತ್ತವನ್ನು ಬಿಡುಗಡೆಗೊಳಿಸಿ ’ಎಂದು ರಾವ್ ಸೂಚಿಸಿದ್ದಾರೆ.

 ಹೆಲಿಕಾಪ್ಟರ್ ಮನಿ ಮತ್ತು ಕ್ಯೂಇ ಒಂದೇ ಆಗಿವೆಯೇ?
 ಕ್ಯೂಇಯಲ್ಲಿಯೂ ಸೆಂಟ್ರಲ್ ಬ್ಯಾಂಕ್‌ಗಳು ಸರಕಾರಿ ಬಾಂಡ್‌ಗಳನ್ನು ಖರೀದಿಸಲು ಮುದ್ರಿತ ಹಣವನ್ನು ಬಳಸುತ್ತವೆ. ಆದರೆ ಕ್ಯೂಇಯಲ್ಲಿ ಬಳಸಲಾದ ಹಣವನ್ನು ‘ಹೆಲಿಕಾಪ್ಟರ್ ಮನಿ’ ಎಂದು ಎಲ್ಲರೂ ಪರಿಗಣಿಸುವುದಿಲ್ಲ. ಸರಕಾರದ ವಿತ್ತೀಯ ಕೊರತೆಗಳನ್ನು ತುಂಬಲು ಹಣವನ್ನು ಮುದ್ರಿಸುವುದು ಎನ್ನುವುದು ಅದರ ಅರ್ಥ ನಿಜ,ಆದರೆ ಸೆಂಟ್ರಲ್ ಬ್ಯಾಂಕ್ ಖರೀದಿಸುವ ಬಾಂಡ್ ಇತ್ಯಾದಿಗಳಿಗೆ ಸರಕಾರವು ಮರುಪಾವತಿ ಮಾಡಬೇಕಾಗುತ್ತದೆ. ಅದು ಸೆಂಟ್ರಲ್ ಬ್ಯಾಂಕಿನಿಂದ ಬಾಂಡ್‌ಗಳ ಖರೀದಿಯಂತಲ್ಲ. ಹೆಲಿಕಾಪ್ಟರ್ ಮನಿಯು ಸೆಂಟ್ರಲ್ ಬ್ಯಾಂಕ್ ನೇರವಾಗಿ ಸರಕಾರಕ್ಕೆ ಸಾಲ ನೀಡುವ ಪ್ರಕ್ರಿಯೆಗಿಂತಲೂ ಭಿನ್ನವಾಗಿದೆ.

ಜಪಾನ್ ‘ಹೆಲಿಕಾಪ್ಟರ್ ಮನಿ’ ತಂತ್ರವನ್ನು ಬಳಸುತ್ತಿದೆಯೇ?
ಕೆಲವು ವಿಶ್ಲೇಷಕರು ಹೇಳುವಂತೆ ಜಪಾನ್ ತನ್ನ ಆರ್ಥಿಕತೆಯನ್ನು ಮೇಲಕ್ಕೆತ್ತಲು ಬಳಸಲು ಮುಂದಾಗಿರುವ ಕಾರ್ಯತಂತ್ರವು ಮೂಲತಃ ಒಂದು ವಿಧದ ‘ಹೆಲಿಕಾಪ್ಟರ್ ಮನಿ’ಯೇ ಆಗಿದೆ. ಏಕೆಂದರೆ ಈ ಕಾರ್ಯತಂತ್ರವು ಬಾಂಡ್ ಪ್ರತಿಫಲಗಳ ಜಿಗಿತದ ಬಗ್ಗೆ ತಲೆಕೆಡಿಸಿಕೊಳ್ಳದೆ ಹೆಚ್ಚು ವೆಚ್ಚವನ್ನು ಮಾಡಲು ಸರಕಾರಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಆದರೆ ಈ ಆರೋಪವನ್ನು ಬ್ಯಾಂಕ್ ಆಫ್ ಜಪಾನ್ (ಆಒ) ತಿರಸ್ಕರಿಸಿದೆ. ಬಿಒಜೆ ಈಗಲೂ ಮಾರುಕಟ್ಟೆಗಳಿಂದ ಬಾಂಡ್‌ಗಳನ್ನು ಖರೀದಿಸುತ್ತದೆ ಮತ್ತು ನೇರವಾಗಿ ಸರಕಾರಿ ಸಾಲದ ಹೊಣೆಯನ್ನು ವಹಿಸಿಕೊಳ್ಳುವುದಿಲ್ಲ ಎಂದು ಅದು ಹೇಳಿದೆ.

ಕೃಪೆ: the economic times

Writer - ಎನ್.ಕೆ.

contributor

Editor - ಎನ್.ಕೆ.

contributor

Similar News