ಕರ್ನಾಟಕದಲ್ಲಿ ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಒಪ್ಪಿಗೆ

Update: 2020-04-21 15:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.21: ಕೊರೋನ ಸೋಂಕು ಚಿಕಿತ್ಸೆಯಲ್ಲಿ ಗಮನಾರ್ಹ ಯಶಸ್ಸು ಗಳಿಸಿರುವ ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ರಾಜ್ಯ ಸರಕಾರದ ಮನವಿಯನ್ನು ಕೇಂದ್ರ ಸರಕಾರದ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯ ಅನುಮೋದಿಸಿದೆ.

ಕೊರೋನ ವೈರಾಣುವಿನ ವಿರುದ್ಧ ಗೆಲುವು ಸಾಧಿಸಲು ರಾಜ್ಯ ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಕೋವಿಡ್ ಸೋಂಕಿತರಿಗೆ ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆಯ ಡಾ.ವಿಶಾಲ್‍ರಾವ್‍ರವರಿಗೆ ಪ್ಲಾಸ್ಮಾ  ಚಿಕಿತ್ಸೆ ಮಾಡಲು ಅನುಮತಿ ನೀಡುವಂತೆ ರಾಜ್ಯ ಸರಕಾರದ ಕೋರಿಕೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಕೊರೋನ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಅಸ್ತ್ರ ಎಂದೇ ಪರಿಗಣಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೆಲದಿನಗಳ ಹಿಂದಷ್ಟೇ ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವ ಪರವಾಗಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಒಬ್ಬ ವೈದ್ಯರಾಗಿ ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್ ವಿರುದ್ಧ ಉತ್ತಮ ಯಶಸ್ಸು ಸಾಧಿಸಬಹುದೆಂದು ನನಗೆ ಅನ್ನಿಸುತ್ತದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ಕೇರಳ ರಾಜ್ಯದಲ್ಲಿ ಈ ಚಿಕಿತ್ಸೆ ಫಲಕಾರಿಯಾಗಿದ್ದು ಕರ್ನಾಟಕದಲ್ಲೂ ಇದು ಉತ್ತಮ ಫಲಿತಾಂಶ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸಾರ್ವಜನಿಕ ಆರೋಗ್ಯ ಇಲಾಖೆಯ ಕೇಂದ್ರ ಔಷಧಿ ನಿಯಂತ್ರಣ ಸಂಸ್ಥೆಯು ಈ ಕುರಿತು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಮುಖ್ಯಸ್ಥರಾದ ಡಾ.ವಿಶಾಲ್‍ ರಾವ್ ಅವರಿಗೆ ಪತ್ರ ಮುಖೇನ ಅನುಮತಿ ನೀಡಿದೆ. ನ್ಯೂ ಡ್ರಗ್ಸ್ ಅಂಡ್ ಕ್ಲಿನಿಕಲ್ ಟ್ರಯಲ್ ರೂಲ್ಸ್ 2019 ಅನ್ವಯ ಈ ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News