ಪಾದರಾಯನಪುರ ಝಮೀರ್ ಅಪ್ಪನ ಆಸ್ತಿನಾ?: ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ಸಿ.ಟಿ.ರವಿ

Update: 2020-04-22 18:08 GMT


ಚಿಕ್ಕಮಗಳೂರು, ಎ.22: ಶಾಸಕ ಝಮೀರ್ ಅಹ್ಮದ್‍ನ ಪರ್ಮಿಷನ್ ತೆಗೆದುಕೊಂಡು ಪಾದರಾಯನಪುರಕ್ಕೆ ಹೋಗಬೇಕಂದ್ರೆ ಅವನೇನು ಮುಹಮ್ಮದ್ ಮಹಮದ್ ಆಲಿ ಜಿನ್ನಾನಾ? ಜಿನ್ನಾನದ್ದು ಪಾಕಿಸ್ತಾನದ ಹಾಗೆ ಪಾದರಾಯನಪುರ ಝಮೀರ್ ಅಪ್ಪನ ಆಸ್ತಿನಾ ಎಂದು ಸಚಿವ ಸಿ.ಟಿ.ರವಿ ಝಮೀರ್ ಅಹ್ಮದ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸಭೆಗೆ ಬಂದಾಗಲೇ ಝಮೀರ್ ವಿಧಾನಸಭೆಗೆ ಬಂದಿದ್ದು, ನನಗೊಂದು ಕಾನೂನು ಝಮೀರ್‍ಗೆ ಒಂದು ಕಾನೂನು ಇಲ್ಲ, ಈ ದೇಶದ ಕಾನೂನು ಎಲ್ಲರಿಗೂ ಒಂದೇ ಆಗಿದೆ. ರಾಜ್ಯದ 224 ಶಾಸಕರಲ್ಲಿ ಝಮೀರ್ ಕೂಡ ಒಬ್ಬ, ಪಾದರಾಯನಪುರ ಝಮೀರ್‍ನ ತಂದೆಯ ಆಸ್ತಿಯಾಗಿದ್ರೂ ದೇಶದೊಳಗಿದ್ದಾಗ ಅವರೂ ಕಾನೂನಿಗೆ ಬದ್ಧನಾಗಿರಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾದರಾಯನಪುರದಲ್ಲಿ ಯಾಕೆ ಹಲ್ಲೆ ನಡೆಸಿದರು ಎಂಬುದರ ಬಗ್ಗೆ ಗಂಭೀರ ತನಿಖೆಯಾಗಬೇಕು. ಅಲ್ಲಿಯ ಮಸೀದಿಯಲ್ಲಿ ಇಂಡೋನೇಷಿಯಾ, ಕಜಕಿಸ್ತಾನಕ್ಕೆ ಸೇರಿದಂತೆ ಜಮಾಅತ್ ಸಮಾವೇಶದಲ್ಲಿ ಭಾಗವಹಿಸಿದ್ದ 19 ಜನ ವಿಸಾ ಅವಧಿ ಮುಗಿದ ತಬ್ಲೀಗ್ ಜಮಾಅತ್ ಸದಸ್ಯರಿಗೆ ಆಶ್ರಯ ನೀಡಿದ್ದರು ಎಂದು ಹೇಳಲಾಗುತ್ತಿದೆ. ಯಾರ ಅನುಮತಿ ಪಡೆದು ಆಶ್ರಯ ನೀಡಿದರು. ವಿಸಾ ಅವಧಿ ಮುಗಿದ ಮೇಲೆ ಶರಣಾಗಬೇಕಿತ್ತು. ಶರಣಾಗದೇ ಅಲ್ಲಿ ಹೇಗಿದ್ದರು ಎಂದು ಪ್ರಶ್ನಿಸಿದ ರವಿ, ಈಗ ತಬ್ಲೀಗ್ ಜಮಾತ್ ಸದಸ್ಯರಿಗೆ ಇರಲು ಅವಕಾಶ ನೀಡುತ್ತಾರೆ, ನಾಳೆ ಇನ್ನೊಬ್ಬ ದೇಶದ್ರೋಹಿ ಅಥವಾ ಭಯೋತ್ಪಾದಕ ಬಂದರೂ ಹೀಗೆ ಆಶ್ರಯ ನೀಡಿದರೆ ಗೊತ್ತಾಗುವುದಾದರೂ ಹೇಗೆ? ಇದೊಂದು ಗಂಭೀರ ವಿಷಯವಾಗಿದ್ದು, ಅಲ್ಲಿ 19 ಜನರಿಗೆ ಆಶ್ರಯ ನೀಡಿರುವುದು ನಿಜವಾದರೆ ಇದು ದೇಶದ ವಿರುದ್ಧದ ಪಿತೂರಿಯಾಗಿದೆ. ಇದರ ಬಗ್ಗೆ ಗಂಭೀರವಾಗಿ ತನಿಖೆಯಾಗಬೇಕೆಂದು ಸರಕಾರವನ್ನು ಒತ್ತಾಯಿಸುವುದಾಗಿ ರವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News